ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬರಗಿ ಸಮೀಪದ ಮುಕ್ತಿ ಕಾಲೊನಿಯ ಬಾಳೆ ತೋಟದಲ್ಲಿ ಕಾಣಿಸಿಕೊಂಡಿದ್ದ ಹುಲಿಯನ್ನು ಬಂಡೀಪುರ ಅರಣ್ಯ ಸಿಬ್ಬಂದಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಮುಕ್ತಿ ಕಾಲೊನಿ ಗ್ರಾಮದ ಲೋಕೇಶ್ ಎಂಬವರ ಬಾಳೆತೋಟದಲ್ಲಿ ಇಂದು ಬೆಳಗ್ಗೆ ಹುಲಿ ಕಾಣಿಸಿಕೊಂಡು ಘರ್ಜಿಸುತ್ತಾ ಬೀಡುಬಿಟ್ಟಿತ್ತು. ಗ್ರಾಮಸ್ಥರು ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದರು. ವಿಷಯ ತಿಳಿಯುತ್ತಿದ್ದಂತೆಯೇ ಬಂಡೀಪುರ ಹುಲಿ ರಕ್ಷಿತಾರಣ್ಯದ ಮದ್ದೂರು ವಲಯ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ, ಸಂಜೆಯ ಹೊತ್ತಿಗೆ ಸೆರೆ ಹಿಡಿದಿದ್ದಾರೆ.
ಬಂಡೀಪುರದ ಪಶು ವೈದ್ಯ ಡಾ.ಮಿರ್ಜಾ ವಾಸಿಂ ಅರಿವಳಿಕೆ ಚುಚ್ಚುಮದ್ದು ಕೊಟ್ಟ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಹುಲಿಯನ್ನು ಸೆರೆ ಹಿಡಿದಿದ್ದಾರೆ.
ಈ ಕುರಿತು ಮದ್ದೂರು ಆರ್ಎಫ್ಓ ಪುನೀತ್ ಅವರು ಮಾತನಾಡಿ, “ಲೋಕೇಶ್ ಎಂಬವರ ಬಾಳೆ ತೋಟದಲ್ಲಿ ಹುಲಿ ಕಾಣಿಸಿಕೊಂಡಿದ್ದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಗಿದ್ದು, ಹುಲಿಗೆ ಅಂದಾಜು 7-8 ವರ್ಷ ವಯಸ್ಸಾಗಿದೆ. ಹುಲಿಯ ಎದೆ ಮತ್ತು ಹಿಂಗಾಲಿಗೆ ಗಾಯವಾಗಿದ್ದು, ಸರಹದ್ದಿನ ಕಾದಾಟದಲ್ಲಿ ಗಾಯಗೊಂಡಿರುವ ಸಾಧ್ಯತೆ ಇದೆ. ಸೋಮವಾರದ ತನಕ ಹುಲಿಯ ಆರೋಗ್ಯದ ಮೇಲೆ ನಿಗಾ ಇರಿಸಿ ಬಳಿಕ ಪಶು ವೈದ್ಯರ ಸಲಹೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ರಕ್ತದ ಮಾದರಿ ಸಂಗ್ರಹಿಸಿ ಮೈಸೂರಿನ ಪ್ರಯೋಗಾಲಯಕ್ಕೆ ಕಳುಹಿಸಲಿದ್ದು, ಹುಲಿಯ ಪಟ್ಟೆಗಳ ಆಧಾರದ ಮೇಲೆ ಗುರುತು ಸಿಗಲಿದೆ” ಎಂದರು.
Laxmi News 24×7