ಚಿಕ್ಕೋಡಿ(ಬೆಳಗಾವಿ): ವಾಡಿಕೆಯಂತೆ ಮಹಾರಾಷ್ಟ್ರ ಪಶ್ಚಿಮಘಟ್ಟದ ಹಾಗೂ ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಮಳೆ ಸುರಿಯುತ್ತಿದ್ದು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿರುವ ಪಂಚ ನದಿಗಳು ಮೈದುಂಬಿ ಹರಿಯುತ್ತಿವೆ. ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾದ ಕಾರಣ ಕೆಳಹಂತದ ಎಂಟು ಸೇತುವೆಗಳು ಹಾಗೂ ನದಿ ಪಾತ್ರದ ಕೆಲವು ದೇವಸ್ಥಾನಗಳು ಜಲಾವೃತಗೊಂಡಿವೆ.
ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ದತ್ತ ಮಂದಿರ ಕೃಷ್ಣಾ ನದಿ ನೀರಿನಿಂದ ಜಲಾವೃತಗೊಂಡಿದೆ. ಈ ಹಿನ್ನೆಲೆ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯ ಸ್ಥಗಿತಗೊಂಡಿದೆ. ನದಿ ಪಾತ್ರದ ಜಮೀನುಗಳಿಗೆ ಕೃಷ್ಣಾ ನದಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ನದಿಗೆ ಇಳಿಯದಂತೆ ಬೆಳಗಾವಿ ಜಿಲ್ಲಾಡಳಿತ ಜನರಿಗೆ ಎಚ್ಚರಿಕೆ ನೀಡಿದೆ.
ನಿಪ್ಪಾಣಿ ಭಾಗದಲ್ಲಿರುವ ವೇದಗಂಗಾ ನದಿ ನೀರಿ ಮಟ್ಟ ಹೆಚ್ಚಾಗಿ ಜತ್ರಾಟ-ಭಿವಸಿ, ಭೋಜವಾಡಿ – ಅಕ್ಕೋಳ, ಸಿದ್ನಾಳ -ಶಿವಾಪುರವಾಡಿ ಮತ್ತು ಕುನ್ನೂರ-ಬಾರವಾಡ ಕೆಳಹಂತದ ಸೇತುವೆಗಳು ಮುಳುಗಡೆಯಾಗಿದ್ದರೆ, ಇತ್ತ ದೂಧಗಂಗಾ ನದಿಗೆ ಅಡ್ಡಲಾಗಿರುವ ಕಾರದಗಾ-ಭೋಜ ಮತ್ತು ಮಲಿಕವಾಡ-ದತ್ತವಾಡ ಬ್ಯಾರೇಜಗಳು ಮುಳುಗಡೆಯಾಗಿವೆ.
ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಲ್ಲೋಳ-ಯಡೂರ ಮತ್ತು ಮಾಂಜರಿ-ಸವದತ್ತಿ ಬ್ಯಾರೇಜಗಳು ಹೀಗೆ ಒಟ್ಟು 8 ಬ್ಯಾರೇಜಗಳು ಈಗಾಗಲೇ ಮುಳುಗಡೆಯಾಗಿದ್ದು, ಇನ್ನೂ ನೀರಿನ ಮಟ್ಟ ಏರಿಕೆಯಾದರೆ ಪ್ರಮುಖ ಆರು ಸೇತುವೆಗಳು ಮುಳುಗಡೆಯಾಗುವ ಸಾಧ್ಯತೆ ಹೆಚ್ಚಿದೆ. ಮುಳುಗಡೆ ಆಗಿರುವ ಸೇತುವೆಗಳಿಗೆ ಪರ್ಯಾಯ ಮಾರ್ಗಗಳು ಇರುವುದರಿಂದ ಜನರು ಸುತ್ತಿಬಳಸಿಕೊಂಡು ಗ್ರಾಮಗಳಿಗೆ ತೆರಳುತ್ತಿದ್ದಾರೆ.
Laxmi News 24×7