ಗದಗ: ”ಜಾತಿ ಗಣತಿ ವರದಿಯು ದೋಷಪೂರಿತವಾಗಿದೆ. ವರದಿಯಲ್ಲಿ ಲಿಂಗಾಯತರಿಗೆ ಅನ್ಯಾಯವಾಗಿದೆ. ಹೀಗಾಗಿ, ಸರ್ಕಾರ ಇನ್ನೊಮ್ಮೆ ಸಮೀಕ್ಷೆ ನಡೆಸಿ, ವರದಿ ಸಿದ್ಧಪಡಿಸಬೇಕು” ಎಂದು ಗದಗದ ತೋಂಟದಾರ್ಯ ಮಠದ ಪೀಠಾಧಿಪತಿ ಡಾ. ಸಿದ್ದರಾಮ ಶ್ರೀಗಳು ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ”ಜಾತಿ ಗಣತಿ ವರದಿಯು ಸಾರ್ವಜನಿಕರಲ್ಲಿ ಸಂದೇಹ ಹುಟ್ಟುಹಾಕಿದೆ. 10 ವರ್ಷಗಳ ಹಿಂದೆ ಗಣತಿ ನಡೆಸಿ, ಈ ವರದಿ ಮಾಡಿದ್ದಾರೆ. ವರದಿಯು ಸಮರ್ಪಕವಾಗಿಲ್ಲ. ಅದನ್ನು ಸಿದ್ದಪಡಿಸಿದವರು ಕರ್ನಾಟಕದ ಪ್ರತಿಯೊಬ್ಬ ವ್ಯಕ್ತಿಯನ್ನೂ ಸಂಪರ್ಕಿಸಿಲ್ಲವೆಂಬ ಆರೋಪವಿದೆ” ಎಂದಿದ್ಧಾರೆ.
”ಕರ್ನಾಟಕದಲ್ಲಿ ಲಿಂಗಾಯತರು ಬಹು ಸಂಖ್ಯಾತರೆಂಬುದು ಎಲ್ಲರಿಗೂ ತಿಳಿದಿದೆ. ಬಳಿಕ ಒಕ್ಕಲಿಗರು ಸೇರಿದಂತೆ ವಿವಿಧ ಜಾತಿಯವರು ಇದ್ದಾರೆ. ಆದರೆ, ವರದಿಯಲ್ಲಿ ಲಿಂಗಾಯತರ ಜನಸಂಖ್ಯೆ ಗಣನೀಯವಾಗಿ ಕಡಿಮೆ ಆಗಿದೆ. ಲಿಂಗಾಯತರು ಮೀಸಲಾತಿಗಾಗಿ ಉಪಜಾತಿಯ ಹೆಸರನ್ನು ಬರೆಸಿರುವ ಕಾರಣಕ್ಕೆ ಹೀಗಾಗಿರಬಹುದು. ದೋಷಪೂರಿತ ವರದಿಯನ್ನು ಸರ್ಕಾರ ಒಪ್ಪಿಕೊಳ್ಳುವುದರಿಂದ ಅನೇಕರಿಗೆ, ಶಿಕ್ಷಣ, ರಾಜಕಾರಣ, ಉದ್ಯೋಗ ಹಾಗೂ ವ್ಯವಸಾಯ ಸೇರಿದಂತೆ ಅನೇಕ ರೀತಿಯಲ್ಲಿ ಜಾತಿ, ಉಪಜಾತಿಗಳಿಗೆ ಅನ್ಯಾಯವಾಗಬಹುದು” ಎಂದು ಶ್ರೀಗಳು ಎಚ್ಚರಿಸಿದರು.
ನೈಜ ವರದಿ ಬಿಡುಗಡೆ ಮಾಡಿ: ”ನೂರಾರು ಉಪಜಾತಿಗಳನ್ನು ವರದಿಯಲ್ಲಿ ಕೈ ಬಿಡಲಾಗಿದೆ. ಕರ್ನಾಟಕದಲ್ಲಿ ಅಂದಾಜಿನ ಪ್ರಕಾರ 1 ಕೋಟಿ 50 ಸಾವಿರಕ್ಕೂ ಹೆಚ್ಚು ಲಿಂಗಾಯತರಿದ್ದಾರೆ. ಆದರೆ, ವರದಿಯಲ್ಲಿ 72 ಲಕ್ಷಕ್ಕೆ ಇಳಿಸಿದ್ದು, ಅತ್ಯಂತ ಆಘಾತಕಾರಿಯಾಗಿದೆ. ಬೇರೆ ಬೇರೆ ಜಾತಿಯವರು ಮುನ್ನೆಲೆಗೆ ಬಂದಿದ್ದಾರೆ. ಸರ್ಕಾರ ಇನ್ನೊಮ್ಮೆ ಪರಿಶೀಲಿಸಿ, ಯಾರಿಗೂ ಅನ್ಯಾಯವಾಗದಂತಹ ನೈಜ ವರದಿ ಬಿಡುಗಡೆ ಮಾಡಬೇಕು” ಎಂದು ಒತ್ತಾಯಿಸಿದರು.
”ಜಾತಿ ಗಣತಿ ಮಾಡಿರುವ ಉದ್ದೇಶ ಸ್ಪಷ್ಟವಾಗಿಲ್ಲ. ಒಳಗಡೆ ಯಾವುದೋ ಒಂದು ಉದ್ದೇಶ ಇಟ್ಟಿಕೊಂಡು ಮಾಡಿರಬಹುದು. ಈ ವರದಿಗೆ ಬಹುತೇಕ ಲಿಂಗಾಯತರ ವಿರೋಧವಿದೆ. ಸಚಿವ ಸಂಪುಟದಲ್ಲಿರುವ ಕಾಂಗ್ರೆಸ್ ಮಂತ್ರಿಗಳಿಂದಲೂ ವಿರೋಧವಿದೆ” ಎಂದರು.
ಸಮಾಲೋಚಿಸಿ ಮುಂದಿನ ತೀರ್ಮಾನ: ”ಇದು ಲಿಂಗಾಯತ ಸಮುದಾಯಕ್ಕೆ ಸಂಬಂಧಿಸಿದ ವಿಚಾರವಾಗಿದೆ. ಸಮಾಜದ ಪ್ರಮುಖರು, ಗಣ್ಯ ವ್ಯಕ್ತಿಗಳು, ಮಠಾಧೀಶರು ಸಮಾಲೋಚನೆ ಮಾಡಿ, ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. ಯಾವ ಜಾತಿಗೂ ಅನ್ಯಾಯವಾಗಬಾರದು ಎಂಬುದು ತೋಂಟದಾರ್ಯ ಮಠದ ನಿಲುವಾಗಿದೆ. ಸರ್ಕಾರ ಸಾಮಾಜಿಕ ನ್ಯಾಯದ ಪರ ಇರಬೇಕೆಂದು ಕೇಳಿಕೊಳ್ಳುತ್ತೇನೆ” ಎಂದು ತಿಳಿಸಿದರು.
ರಾಜಕೀಯ ಉದ್ದೇಶ ಇರಬಹುದು: ”ರಾಜಕೀಯ ಉದ್ದೇಶದಿಂದ ಜಾತಿ ಗಣತಿ ಜಾರಿಗೆ ತರುತ್ತಿರಬಹುದು. ಜಾತಿ ಗಣತಿಯಲ್ಲಿ ಲಿಂಗಾಯತರಂತೆಯೇ ಒಕ್ಕಲಿಗರಿಗೂ ಅನ್ಯಾಯವಾಗಿದೆ ಎಂದು ರಾಜ್ಯದ ಸರ್ಕಾರದ ಪ್ರಮುಖ ಸಚಿವರೇ ಹೇಳಿದ್ದಾರೆ. ಸಂಪುಟದಲ್ಲಿರುವ ಲಿಂಗಾಯತ ಹಾಗೂ ಒಕ್ಕಲಿಗ ಸಚಿವರು ಈ ವರದಿಯಲ್ಲಿ ದೋಷವಿದೆ. ವರದಿ ಸಮರ್ಪಕವಾಗಿಲ್ಲ, ಮರುಪರಿಶೀಲನೆ ಮಾಡಬೇಕು ಆಗ್ರಹಿಸಿದ್ದಾರೆ. ಏಪ್ರಿಲ್ 17ರಂದು ನಡೆಯುವ ವಿಶೇಷ ಸಚಿವ ಸಂಪುಟದಲ್ಲಿ ಏನು ತೀರ್ಮಾನ ಆಗಲಿದೆ ಎಂದು ಕಾದು ನೋಡೋಣ” ಎಂದು ಸ್ವಾಮೀಜಿಗಳು ಹೇಳಿದರು.
Laxmi News 24×7