ಚಿಕ್ಕಮಗಳೂರು: “ಸರ್ಕಾರ ಯಾವುದೋ ಒಂದು ಜಾತಿಯನ್ನು ತುಷ್ಟೀಕರಣ ಮಾಡಲು ಜಾತಿ ಗಣತಿ ವರದಿ ತಯಾರಿಸಿದೆ. ಹತ್ತಾರು ವರ್ಷಗಳಿಂದ ಜಾತಿ ಗಣತಿ ವರದಿ ನೆನೆಗುದಿಗೆ ಬಿದ್ದಿತ್ತು. ಜಾತಿ ಗಣತಿಗೆ ಅಖಿಲ ಭಾರತ ವೀರಶೈವ ಮಹಾಸಭಾ ಸಂಘ ವಿರೋಧಿಸಿದೆ. ಜಾತಿ ಗಣತಿ ವರದಿಯನ್ನು ಪಾರದರ್ಶಕವಾಗಿ ಮಾಡಿಲ್ಲ” ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ರಂಭಾಪುರಿ ಪೀಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಸರ್ಕಾರದ ಮೂಗಿನ ನೇರಕ್ಕೆ ಜಾತಿ ಗಣತಿ ವರದಿ ತಯಾರಾಗಿದೆ. ಜಾತಿ ಗಣತಿ ವರದಿ ಪುನರ್ವಿಮರ್ಶೆ ಆಗಬೇಕು. ಅಧಿಕಾರಿಗಳು ಮನೆ ಮನೆಗೆ ಭೇಟಿ ಕೊಡಬೇಕು. ಜಾತಿ ಗಣತಿ ವರದಿ ಬಗ್ಗೆ ಈಗಾಗಲೇ ಹಲವರು ಆತಂಕ ಹೊರಹಾಕಿದ್ದಾರೆ. ಜನರ ಭಾವನೆಯನ್ನು ಅರಿತು ಪಾರದರ್ಶಕತೆಯಿಂದ, ಮನೆ ಮನೆಗೆ ಭೇಟಿ ಕೊಟ್ಟು ಅಧಿಕಾರಿಗಳು ವರದಿ ತಯಾರಿಸಬೇಕು” ಎಂದು ಆಗ್ರಹಿಸಿದರು.”ಆಡಳಿತ ಪಕ್ಷದ ಅನೇಕ ಶಾಸಕರು ಈ ಜಾತಿ ಗಣತಿ ವರದಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷದವರು ಜಾತಿ ಗಣತಿ ವರದಿಯನ್ನು ಬಹಿಷ್ಕಾರ ಮಾಡಿದ್ದಾರೆ. ಮುಖ್ಯಮಂತ್ರಿಗಳು ಪುನರ್ ಪರಿಶೀಲನೆ ನಡೆಸಿ, ಜಾತಿ ಗಣತಿ ವರದಿಗೆ ಮುಂದಾದರೆ ಜನರಿಗೆ ಒಳಿತಾಗಲಿದೆ. ಇಲ್ಲವಾದರೆ ಜಾತಿ ಸಂಕಷ್ಟಕ್ಕೆ ಕಾರಣವಾಗಲಿದೆ” ಎಂದು ಹೇಳಿದರು.
Laxmi News 24×7