ಬೆಂಗಳೂರು : ರೈತರು ಕೃಷಿ ವ್ಯವಸಾಯದೊಂದಿಗೆ ಹೈನುಗಾರಿಕೆ ಮತ್ತು ಪಶುಸಂಗೋಪನೆ ಸಹ ಮಾಡುತ್ತಿದ್ದು, ಸರ್ಕಾರ ಹೈನುಗಾರಿಕೆ ಹಾಗೂ ಪಶುಸಂಗೋಪನೆ ಮೂಲಕ ಆರ್ಥಿಕ ಬಲವರ್ಧನೆ ಮಾಡಿಕೊಳ್ಳಲು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಕೆಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.
ಮುಖ್ಯವಾಗಿ ಹಾಲು ಉತ್ಪಾದಕರಿಗೆ ಉತ್ತೇಜನ ನೀಡುತ್ತಿದ್ದು, ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಸರಬರಾಜು ಮಾಡುವ ಸದಸ್ಯರಿಗೆ ಪ್ರತಿ ಲೀಟರ್ ಗುಣಾತ್ಮಕ ಹಾಲಿಗೆ ರೂ. 5 ರೂ. ರಂತೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಇತ್ತೀಚೆಗೆ ಸರ್ಕಾರ ಹಾಲಿನ ದರ 4 ರೂ.ಗೆ ಏರಿಕೆ ಮಾಡಿದ್ದು, ಆ ಹಣವನ್ನು ರೈತರಿಗೆ ಕೊಡಲು ಉದ್ದೇಶಿಸಲಾಗಿದೆ. ಅದೇ ರೀತಿ ಹೈನುಗಾರಿಕೆ ಮಾಡುವ ಪುರುಷ ಅಥವಾ ಮಹಿಳಾ ರೈತರಿಗೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ.
ಮಹಿಳೆಯರಿಗೆ ಶೇ.6ರ ಬಡ್ಡಿ ಸಹಾಯಧನ : ರೈತ ಮಹಿಳೆಯರಲ್ಲಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಹಸು/ಎಮ್ಮೆ ಖರೀದಿಗೆ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದಲೇ ಶೇ.6ರ ಬಡ್ಡಿ ಸಹಾಯಧನ ನೀಡಲಾಗುತ್ತದೆ. ಅನುಸೂಚಿತ ಜಾತಿ ಉಪ ಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಕಾಯ್ದೆ 2013ರ ರಡಿ ಬಳಕೆಯಾಗದೇ ಇರುವ ಮೊತ್ತವನ್ನು ಪರಿಶಿಷ್ಟ ಜಾತಿ ಉಪಯೋಜನೆಯಡಿಯಲ್ಲಿ ತಲಾ 5 ವಾರದ 20 ಕೋಳಿ ಮರಿಗಳನ್ನು ಉತ್ಪಾದಿಸಿ ಗ್ರಾಮೀಣ ಭಾಗದ ಪರಿಶಿಷ್ಟ ಜಾತಿಯ ರೈತ ಮಹಿಳೆಯರಿಗೆ ಉಚಿತವಾಗಿ ವಿತರಿಸಿ ಅವರ ಅದಾಯ ಹೆಚ್ಚಿಸುವ ಕಾರ್ಯಕ್ರಮ ರೂಪಿಸಲಾಗಿದೆ. ಇದರ ಜೊತೆಗೆ ಗ್ರಾಮೀಣ ಭಾಗದ ಪರಿಶಿಷ್ಟ ಪಂಗಡದ ರೈತರಿಗೆ ಶೇ.90ರ ಸಹಾಯಧನದೊಂದಿಗೆ 10+1 ಕುರಿ/ಮೇಕೆ ಘಟಕ ವಿತರಣೆ ಮಾಡಲಾಗುತ್ತಿದೆ. ಹಿತ್ತಲ ಕೋಳಿ ಸಾಕಾಣಿಕ ಪ್ರೋತ್ಸಾಹಿಸಲು ತಲಾ 5 ವಾರದ 20 ಕೋಳಿ ಮರಿಗಳನ್ನು ರೈತ ಮಹಿಳಾ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ.
ರಾಸುಗಳ ಆಕಸ್ಮಿಕ ಸಾವಿಗೆ ಆಪತ್ತು ನಿಧಿ : ರಾಸುಗಳು ಆಕಸ್ಮಿಕ ಮರಣ ಹೊಂದಿದಾಗ ರೈತರಿಗೆ ಉಂಟಾಗುವ ಆರ್ಥಿಕ ನಷ್ಟವನ್ನು ಭರಿಸಲು ಮರಣ ಹೊಂದಿದ ದನ, ಎಮ್ಮೆ, ಎತ್ತು, ಹೋರಿ ಮತ್ತು ಕಡಸುಗಳಿಗೆ ರೂ.10 ಸಾವಿರ ರೂ. ಪರಿಹಾರಧನವನ್ನು ರಾಸುಗಳ ಮಾಲೀಕರಿಗೆ ವಿತರಿಸುವ ಯೋಜನೆಯೂ ಇದೆ. ಇದರ ಜೊತೆಗೆ ಸಣ್ಣ ಪ್ರಾಣಿಗಳ ಆಕಸ್ಮಿಕ ಸಾವಿಗೆ ಆಪತ್ತು ನಿಧಿ ಸ್ಥಾಪನೆ ಮಾಡಿದ್ದು, ಆಕಸ್ಮಿಕ ಮರಣ ಹೊಂದಿದ 3-6 ತಿಂಗಳ ವಯಸ್ಸಿನ ಕುರಿ/ಮೇಕೆಗಳಿಗೆ 3,500 ರೂ. ಹಾಗೂ 6 ತಿಂಗಳ ಮೇಲ್ಪಟ್ಟ ಕುರಿ/ಮೇಕೆಗಳಿಗೆ ಅವುಗಳ ಮಾಲೀಕರಿಗೆ ರೂ.5000 ರೂ. ಪರಿಹಾರಧನ ವಿತರಣೆ ಮಾಡಲಾಗುವುದು ಎಂದು ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ : 20+1 ಕುರಿ/ಮೇಕೆ ಘಟಕಗಳನ್ನು ರಾಜ್ಯದಲ್ಲಿನ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿನ ಅರ್ಹ ಕುರಿಗಾಹಿ ಸದಸ್ಯರುಗಳಿಗೆ ನೀಡಲಾಗುತ್ತದೆ. ಘಟಕದ ವೆಚ್ಚ 1,75,000 ರೂ. (ಶೇ.50ರಷ್ಟು) ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (NCDC, ಸಹಕಾರ ಇಲಾಖೆ, ಭಾರತ ಸರ್ಕಾರದ ವತಿಯಿಂದ ಸಾಲ, 43750 ರೂ. (ಶೇ.25 ರಷ್ಟು) ಕರ್ನಾಟಕ ಸರ್ಕಾರದ ಸಹಾಯಧನ 43750 ರೂ. (ಶೇ.25) ಯಷ್ಟು ಫಲಾನುಭವಿಗಳ ವಂತಿಗೆ/ಬ್ಯಾಂಕ್ ಸಾಲ ಲಭಿಸಲಿದೆ.
Laxmi News 24×7