ಹಾಸನ : ಸಭಾಧ್ಯಕ್ಷರ (ಸ್ಪೀಕರ್) ಪೀಠದ ಮೇಲೆ ಕುಳಿತುಕೊಳ್ಳುವುದು, ಮುಖದ ಮೇಲೆ ಪೇಪರ್ ಎಸೆಯುವುದು ಒಳ್ಳೆಯದಲ್ಲ. ಸಭಾಧ್ಯಕ್ಷರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಿದ್ದಂತೆ, ಅವರಿಗೆ ಗೌರವ ಕೊಡಬೇಕು. ಈ ಪರಿಸ್ಥಿತಿ ಮುಂದುವರಿದರೆ ರಾಜೀನಾಮೆ ನೀಡುವ ತೀರ್ಮಾನಕ್ಕೆ ಬಂದಿದ್ದೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಹೇಳಿದರು.
ಸಕಲೇಶಪುರಕ್ಕೆ ಭೇಟಿ ನೀಡಿದ್ದ ಅವರು ಇತ್ತೀಚೆಗೆ ಅನಾವರಣಗೊಂಡ ಕೆಂಪೇಗೌಡ ಪ್ರತಿಮೆ ಸ್ಥಳದಲ್ಲಿ ಕೆಲ ಸಮಯ ಕಳೆದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಸದನ ಒಂದು ದೊಡ್ಡ ದೇವಸ್ಥಾನದಂತೆ, ಆದರೆ ಹನಿಟ್ರ್ಯಾಪ್ನಂತಹ ಘಟನೆಗಳು ತಲೆ ತಗ್ಗಿಸುವಂತಹ ವಿಷಯ. ಇದರಿಂದ ಯಾರಿಗೆ ಒಳ್ಳೆಯದಾಗುತ್ತೆ? ಹನಿಟ್ರ್ಯಾಪ್ ಮಾಡಿದವನು ಒಳ್ಳೆಯವನಲ್ಲ, ಮಾಡಿಸಿಕೊಂಡವನೂ ಒಳ್ಳೆಯವನಲ್ಲ ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು.
ರಾಜ್ಯದ ರಾಜಕೀಯ ಪರಿಸ್ಥಿತಿ ಮತ್ತು ಸದನದ ಕಾರ್ಯವೈಖರಿಯ ಬಗ್ಗೆ ಮಾತನಾಡಿ, ಪ್ರಜಾಪ್ರಭುತ್ವದ ಮೌಲ್ಯವನ್ನು ಎಲ್ಲರೂ ಅರಿತುಕೊಳ್ಳಬೇಕು. ಹಿಂದಿನ ರಾಜಕಾರಣ ಮತ್ತು ಈಗಿನ ರಾಜಕಾರಣದಲ್ಲಿ ಬಹಳ ಅಂತರವಿದೆ. ಜನ ಸುಧಾರಣೆ ಆಗಿದ್ದಾರೆ. ಆದರೆ ಅದು ಒಳ್ಳೆಯದಲ್ಲ. ದುಡ್ಡು ಕೊಟ್ಟು ಗೆದ್ದು ಬಂದು, ಬೆಂಗಳೂರಿನಲ್ಲಿ ಕುಳಿತು ದುಡ್ಡು ಮಾಡಿ, ಮತ್ತೆ ದುಡ್ಡು ಖರ್ಚು ಮಾಡಿ ಆರಿಸಿಕೊಳ್ಳುವ ಪರಿಪಾಠ ಪ್ರಸ್ತುತವಿದೆ. ಎಲ್ಲಿಯವರೆಗೆ ದುಡ್ಡು ಕೊಟ್ಟು ಮತ ಹಾಕಿಸಿಕೊಳ್ಳುತ್ತಾರೆಯೋ, ಅಲ್ಲಿಯವರೆಗೆ ಪ್ರಜಾಪ್ರಭುತ್ವ ಕೇಳುವವರು ಇರುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
Laxmi News 24×7