ಬೆಂಗಳೂರು: ಲಕ್ಷ್ಮಿ ಬಾರಮ್ಮ ಧಾರಾವಾಹಿ ಖ್ಯಾತಿಯ ನಟ ಚಂದನ್ ಕುಮಾರ್ ಪ್ರೇಮ ಬರಹ ಸಿನಿಮಾ ಮೂಲಕ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡಿದ್ದರು. ಇದು ತಮಿಳಿನಲ್ಲಿ ಸಹ ತಯಾರಾಗಿತ್ತು. ಇದೀಗ ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ಚಂದನ್ ಬ್ಯುಸಿಯಾಗಿದ್ದು, ಫೋಟೋ ಶೂಟ್ನಲ್ಲೂ ತೊಡಗಿದ್ದಾರೆ. ಇದೀಗ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಕುರಿತು ಪೋಸ್ಟ್ ಮಾಡಿದ್ದಾರೆ.
ನಟ ಚಂದನ್ ತಮ್ಮ ವಿಶಿಷ್ಟ ಸಿನಿಮಾಗಳ ಮೂಲಕವೇ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡಿದ್ದರು. ಲವ್ ಯೂ ಆಲಿಯಾ, ಬೆಂಗಳೂರು-560023 ನಂತರ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಅರ್ಜುನ್ ಜೊತೆಗೆ ಪ್ರೇಮ ಬರಹ ಬರೆದರು. ಹೀಗೆ ತಮ್ಮದೇಯಾದ ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಆದರೆ ಸಿನಿಮಾದಲ್ಲಿ ಇತ್ತಿಚೆಗೆ ಅವರಿಗೆ ಅಷ್ಟೇನು ಅವಕಾಶಗಳು ಒಲಿಯುತ್ತಿಲ್ಲ. ಹೀಗಾಗಿ ಮತ್ತೆ ಸಿರಿಯಲ್ಗಳಲ್ಲಿ ಬ್ಯುಸಿಯಾಗಿದ್ದು, ತೆಲುಗು ಸಿರಿಯಲ್ನಲ್ಲೂ ಮಿಂಚುತ್ತಿದ್ದಾರೆ.
ಸದ್ಯ ಕನ್ನಡದ ಸರ್ವ ಮಂಗಳ ಮಾಂಗಲ್ಯೆ ಧಾರಾವಾಹಿಯಲ್ಲಿ ಬ್ಯುಸಿಯಾಗಿರುವ ಚಂದನ್, ಅತ್ತ ತೆಲುಗಿನ ‘ಸಾವಿತ್ರಮ್ಮ ಗಾರಿ ಅಬ್ಬಾಯಿ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನೊಂದೆಡೆ ಫೋಟೋ ಶೂಟ್ ಮೂಲಕ ಮಾಸ್ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಿರುವ ಚಂದನ್, ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದು, ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇದೀಗ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಅಲ್ಲದೆ ಯುವ ಸಮೂಹಕ್ಕೆ ಸಲಹೆಯನ್ನೂ ನೀಡಿದ್ದಾರೆ. ಈ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಅವರು, ಜೀವನ ಮತ್ತು ಖಿನ್ನತೆಯ ವಿಷಯ ಬಂದಾಗ ಸ್ವಾರ್ಥಿಯಾಗಿ ಜೀವನವನ್ನು ಆರಿಸಿಕೊಳ್ಳಿ. ಜೀವಕ್ಕಿಂತ ಇನ್ನಾವುದು ಮುಖ್ಯವಲ್ಲ ಎಂದು ಮಾಸ್ ಲುಕ್ ನೀಡಿರುವ ಫೋಟೋಗೆ ಖಡಕ್ ಸಾಲುಗಳನ್ನು ಬರೆದಿದ್ದಾರೆ.
ಚಂದನ್ ಇತ್ತೀಚೆಗೆ ಖಡಕ್ ಖದರ್ ಲುಕ್ ಮೂಲಕ ತಮ್ಮ ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ. ಫೋಟೋ ಶೂಟ್ ಚಿತ್ರಗಳನ್ನು ಹೆಚ್ಚು ಹಂಚಿಕೊಳ್ಳುತ್ತಿದ್ದು, ಅಭಿಮಾನಿಗಳು ಸಹ ಅಷ್ಟೇ ಪ್ರೀತಿಯಿಂದ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.