ಬೆಳಗಾವಿ, ಆ.27: ರಾಜ್ಯದಲ್ಲಿ ನೈತಿಕ ಪೊಲೀಸ್ ಗಿರಿ(Moral Policing) ಪ್ರಕರಣಗಳು ಹೆಚ್ಚುತ್ತಲೇ ಇವೆ. ಅನ್ಯಕೋವಿನ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದಾನೆ ಎಂದು ಆರೋಪಿಸಿ ಅದೇ ಸಮುದಾಯದ ವಿದ್ಯಾರ್ಥಿಗಳು ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ್ದ ಘಟನೆ ಮಂಗಳೂರಿನಲ್ಲಿ ನಡೆದಿತ್ತು(Group Attack). ಈಗ ಬೆಳಗಾವಿ ನಗರದ ಖಂಜರ್ ಗಲ್ಲಿ ದರ್ಗಾ ಬಳಿ ನೈತಿಕ ಪೊಲೀಸ್ಗಿರಿ ಪ್ರಕರಣ ಕಂಡು ಬಂದಿದೆ. ಅನ್ಯಕೋವಿನ ಯುವತಿ ಜೊತೆ ಬಂದಿದ್ದ ಹಿಂದೂ ಯುವಕನ ಮೇಲೆ 10ರಿಂದ 12 ಯುವಕರ ಗುಂಪು ಹಲ್ಲೆ ನಡೆಸಿದೆ. ಸದ್ಯ ಘಟನೆ ಸಂಬಂಧ ಬೆಳಗಾವಿಯ ಮಾರ್ಕೆಟ್ ಠಾಣೆಯಲ್ಲಿ 8 ಜನರ ವಿರುದ್ಧ ಕೇಸ್ ದಾಖಲಾಗಿದೆ.
ಮಧ್ಯಾಹ್ನ 2.30ಕ್ಕೆ ಅನ್ಯಕೋಮಿನ ಯುವತಿಯೊಂದಿಗೆ ಜ್ಞಾನೇಶ್ವರ ಡವರಿ ಎಂಬ ಹಿಂದೂ ಯುವಕ ಮಾರ್ಕೆಟ್ಗೆ ಬಂದಿದ್ದ. ಈ ವೇಳೆ ಖಡೇಬಜಾರ್ ಮಾರ್ಕೆಟ್ನ ಖಂಜರ್ ಗಲ್ಲಿ ದರ್ಗಾ ಬಳಿ ಅನ್ಯಕೋಮಿನ 10 ರಿಂದ 12 ಜನ ಯುವಕರ ತಂಡ ಹಿಂದೂ ಯುವಕನ ಮೇಲೆ ದಾಳಿ ನಡೆಸಿ ಹಲ್ಲೆ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಹಲ್ಲೆ ಮಾಡಿದ ವಿಡಿಯೋ ವೈರಲ್ ಆಗಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭಾ ಮೂಲದ ಜ್ಞಾನೇಶ್ವರ ಡವರಿ ಮತ್ತು ಅನ್ಯಕೋಮಿನ ಯುವತಿ ಒಟ್ಟಾಗಿ ಮಾರ್ಕೆಟ್ಗೆ ಬಂದಿದ್ದರು. ಜ್ಞಾನೇಶ್ವರ ಊರು ಊರು ತಿರುಗಿ ಚಪ್ಪಲಿ ಮಾರಾಟ ಮಾಡುವ ವ್ಯಾಪಾರಿ. ಯುವತಿ ಘಟಪ್ರಭಾದಲ್ಲಿ ಬ್ಯೂಟಿ ಫಾರ್ಲರ್ ನಡೆಸುತ್ತಿದ್ದಾಳೆ. ಬೆಳಗಾವಿ ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ಯುವಕ-ಯುವತಿ ಇಬ್ಬರೂ ಭೇಟಿಯಾಗಿದ್ದಾರೆ. ಆಗ ಬ್ಯೂಟಿ ಪಾರ್ಲರ್ ಸಾಮಾಗ್ರಿ ತೆಗೆದುಕೊಂಡು ಬರೋಣಾ ಬಾ ಎಂದು ಯುವತಿ ಯುವಕನನ್ನು ಮಾರುಕಟ್ಟೆಗೆ ತನ್ನ ಜೊತೆ ಬರಲು ಕರೆದಿದ್ದಾಳೆ. ಒಂದೇ ಊರಿನವಳು ಪರಿಚಯಸ್ಥಳು ಆಗಿದ್ದರಿಂದ ಅವಳೊಂದಿಗೆ ಜ್ಞಾನೇಶ್ವರ ಆಟೋ ಹತ್ತಿದ್ದ. ಆಟೋದಲ್ಲಿ ಖಂಜರ್ ಗಲ್ಲಿ ದರ್ಗಾ ಬಳಿ ಬಂದಾಗ ಯುವಕರ ಗುಂಪು ಹಲ್ಲೆ ಮಾಡಿದೆ. ಚಲಿಸುತ್ತಿದ್ದ ಆಟೋವನ್ನ ಅಡ್ಡಗಟ್ಟಿ ತಡೆದು ಹಲ್ಲೆ ಮಾಡಲಾಗಿದೆ. ಹಲ್ಲೆಗೊಳಗಾದ ಜ್ಞಾನೇಶ್ವರ ಡವರಿ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ನಾಲ್ವರು ಅಪ್ರಾಪ್ತರು ಸೇರಿ 8 ಜನ ಅಪರಿಚಿತರ ವಿರುದ್ಧ ಕೇಸ್ ದಾಖಲಾಗಿದೆ.
Laxmi News 24×7