ಬೆಂಗಳೂರು: ಪಂಚ ಗ್ಯಾರಂಟಿಗಳು ಜಾರಿ ಗೊಳಿಸಿರುವ ಹಿನ್ನೆಲೆ ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿ ನಾಯಕರ ಕಾಲೆಳೆದಿದೆ.
ಟ್ವೀಟ್ ಮೂಲಕ ನಳಿನ್ ಕುಮಾರ್ ಕಟೀಲ್ ಅವರೇ, ನಿಮ್ಮ ಮನೆಗೂ 200 ಯೂನಿಟ್ ವಿದ್ಯುತ್ ಫ್ರೀ. ಬೊಮ್ಮಾಯಿ ಅವರೇ, ನಿಮ್ಮ ಮನೆಗೂ ಫ್ರೀ, ಶೋಭಾ ಕರಂದ್ಲಾಜೆ ಅವರೇ ನಿಮಗೂ ಪ್ರಯಾಣ ಫ್ರೀ ಎಂದು ವ್ಯಂಗ್ಯವಾಡಿದೆ. ಸಿ.ಟಿ.ರವಿ ಅವರೇ, ನಿಮ್ಮ ಮನೆಯವರಿಗೂ 2000 ಫ್ರೀ. ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ, (ಪದವಿ ಪಡೆದಿದ್ದವರಿದ್ರೆ ಮಾತ್ರ). ಇದು ನಮ್ಮ ಗ್ಯಾರಂಟಿ ಎಂದು ಕಿಚಾಯಿಸಿದೆ.
ಚುನಾವಣೆಗೆ ಮುನ್ನ ಘೋಷಣೆ ಮಾಡಿರುವ ಪಂಚ ಗ್ಯಾರಂಟಿ ಯೋಜನೆಗಳ ಜಾರಿಗೊಳಿಸಿ ಸಂಪುಟ ಸಭೆಯಲ್ಲಿ ತೀರ್ಮಾನಗೊಳಿಸಲಾಗಿದೆ. ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 2,000 ರೂ ನೀಡುವ ಗೃಹಲಕ್ಷ್ಮಿ ಯೋಜನೆ, ಪ್ರತಿ ತಿಂಗಳು ಗೃಹ ಬಳಕೆಯ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ, ಪದವಿಧರರಿಗೆ 3,000 ರೂ ಹಾಗೂ ಡಿಪ್ಲೋಮಾ ಪದವೀಧರರಿಗೆ 1,500 ರೂ ನೀಡುವ ಯುವನಿಧಿ ಯೋಜನೆ, ರಾಜ್ಯದ ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣದ ಶಕ್ತಿ ಯೋಜನೆ ಹಾಗೂ ಬಿಪಿಎಲ್ ಕಾರ್ಡ್ ದಾರರಿಗೆ 10 ಕೆ.ಜಿ. ಅನ್ನಭಾಗ್ಯ ಯೋಜನೆ ಜಾರಿ ಮಾಡಿ ತೀರ್ಮಾನಿಸಲಾಗಿದೆ.
ಗ್ಯಾರಂಟಿಗಳನ್ನು ಜಾರಿಗೊಳಿಸದೇ ಇದ್ದಲ್ಲಿ ಬೀದಿಗಿಳಿದು ಹೋರಾಟ ಮಾಡುವುದಾಗಿ ಹೇಳಿದ್ದ ಕಟೀಲ್: ನಿನ್ನೆ(ಗುರುವಾರ) ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಕಾಂಗ್ರೆಸ್ ಚುನಾವಣಾ ಸಂದರ್ಭದಲ್ಲಿ ಐದು ಗ್ಯಾರಂಟಿ ಘೋಷಣೆ ಮಾಡಿತ್ತು. ಖರ್ಗೆ, ರಾಹುಲ್ ಗಾಂಧಿ ಸೇರಿ ಪ್ರಮುಖರು ಗ್ಯಾರಂಟಿ ಘೋಷಣೆ ಮಾಡಿದ್ದರು. ಗ್ಯಾರಂಟಿ ಕಾರ್ಡ್ ಹಿಡಿದು ಎಲ್ಲ ಜನರಿಗೆ ಉಪಯೋಗ ಕೊಡ್ತೀವಿ ಅಂತ ಹೇಳಿದ್ರು. 24 ಗಂಟೆಯಲ್ಲಿ ಜಾರಿಗೆ ತರುತ್ತೇವೆ ಅಂತಲೂ ನುಡಿದಿದ್ದರು. ಆದರೆ, ಅಧಿಕಾರ ಹಿಡಿದು 20 ದಿನವಾದರೂ ಕೂಡ ಗ್ಯಾರಂಟಿ ಇನ್ನೂ ಅನುಷ್ಠಾನ ಆಗಿಲ್ಲ ಎಂದು ಟೀಕಿದ್ದರು.
“ಕಾಂಗ್ರೆಸ್ನ ಸುಳ್ಳು ಜನರಿಗೆ ಈಗ ಅರ್ಥವಾಗಿದೆ. ಕಾಂಗ್ರೆಸ್ ಸುಳ್ಳುಗಾರರ ಪಾರ್ಟಿ, ಮೋಸಗಾರರ ಪಾರ್ಟಿ ಎಂಬುದು ಜನರಿಗೆ ಸ್ಪಷ್ಟವಾಗಿದೆ. ಕಾಂಗ್ರೆಸ್ ಜನರ ಬಳಿ ಕ್ಷಮೆಯಾಚಿಸಿ ತಕ್ಷಣ ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡಬೇಕು. ಜನ ಕಾಂಗ್ರೆಸ್ ಮೇಲೆ ಆಕ್ರೋಶಿತಗೊಂಡಿದ್ದಾರೆ. ಕಾಂಗ್ರೆಸ್ ಅಡ್ಡದಾರಿ ಹಿಡಿದು ಅಧಿಕಾರ ಪಡೆದಿದೆ. ಸಿದ್ಧರಾಮಯ್ಯಗೆ ಇದು ಆರ್ಥಿಕವಾಗಿ ಕಷ್ಟ ಎಂದು ಗೊತ್ತಿದೆ. ಆರ್ಥಿಕ ಸಚಿವರಾಗಿ ಅನುಭವ ಹೊಂದಿದ ಸಿದ್ಧರಾಮಯ್ಯ ಸುಳ್ಳು ಹೇಳಿದ್ದಾರೆ. ಜನ ಆಕ್ರೋಶಗೊಂಡು ನಂತರ ಆಗುವ ಅನಾಹುತಕ್ಕೆ ಸರ್ಕಾರವೇ ನೇರ ಹೊಣೆಯಾಗುತ್ತದೆ. ಈಗ ಕಾಂಗ್ರೆಸ್ ಜನರ ಹಾದಿ ತಪ್ಪಿಸುತ್ತಿದೆ. ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸದೇ ಇದ್ದಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತೇವೆ” ಎಂದು ಕಾಂಗ್ರೆಸ್ ವಿರುದ್ಧ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದರು.