ಚಿಕ್ಕೋಡಿ ನಗರದಲ್ಲಿ ಇಂದು ಚಿಕ್ಕೋಡಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಮಹಿಳಾ ಮೀಸಲಾತಿ ವಿಧೇಯಕವನ್ನು ತಕ್ಷಣವೇ ಜಾರಿಗೆ ತರುವಂತೆ ಒತ್ತಾಯಿಸಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಾಯಿತು. ಮಹಿಳೆಯರಿಗೆ ರಾಜಕೀಯವಾಗಿ ನ್ಯಾಯ ಸಿಗುವವರೆಗೆ ನಮ್ಮ ಧ್ವನಿ ನಿಲ್ಲದು.
ಮಹಿಳೆಯರ ರಾಜಕೀಯ ಸಬಲೀಕರಣಕ್ಕಾಗಿ ಕಾಂಗ್ರೆಸ್ ಪಕ್ಷದ ಬದ್ಧತೆ ಇಂದಿನದ್ದಲ್ಲ. 33% ಮಹಿಳಾ ಮೀಸಲಾತಿಯ ಪರಿಕಲ್ಪನೆಯನ್ನು ಮೊದಲ ಬಾರಿಗೆ ಮುಂದಿಟ್ಟದ್ದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ. ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿ ಮಹಿಳಾ ನಾಯಕತ್ವಕ್ಕೆ ಬುನಾದಿ ಹಾಕಿದ್ದು ಕಾಂಗ್ರೆಸ್ ಪಕ್ಷವೇ ಎಂಬುದು ಹೆಮ್ಮೆಯ ವಿಚಾರ.
ಇದೀಗ ಬಿಜೆಪಿ ಸರ್ಕಾರ ಮಹಿಳಾ ಮೀಸಲಾತಿ ವಿಚಾರವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎನ್ನುವ ಆತಂಕ ನಮ್ಮದು. ಲೋಕಸಭಾ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರ 33% ಮೀಸಲಾತಿಗಾಗಿ 2023ರಲ್ಲಿ ಮಸೂದೆ ಅಂಗೀಕಾರವಾದಾಗಲೇ 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಸ್ತುತ 543 ಸ್ಥಾನಗಳಿಗೆ ಇದನ್ನು ಜಾರಿಗೊಳಿಸುವ ಅವಕಾಶವಿತ್ತು. ಆದರೆ ಅದು ಆಗಲಿಲ್ಲ. ಈಗ ಡಿಲಿಮಿಟೇಷನ್ ಜೊತೆಗೆ ಇದನ್ನು ಜೋಡಿಸಿ ಜಾರಿಗೆ ತರುವ ಪ್ರಯತ್ನ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇದು ಕೇವಲ ಮಹಿಳಾ ಸಬಲೀಕರಣದ ಪ್ರಶ್ನೆಯಷ್ಟೇ ಅಲ್ಲ, ಫೆಡರಲ್ ಸಮತೋಲನದ ಪ್ರಶ್ನೆಯೂ ಹೌದು. ಜನಸಂಖ್ಯೆ ನಿಯಂತ್ರಣದಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಭಾರತದ ರಾಜ್ಯಗಳಿಗೆ ಈ ಪ್ರಕ್ರಿಯೆಯಿಂದ ಅನ್ಯಾಯವಾಗುವ ಸಾಧ್ಯತೆ ಇದೆ. ಡಿಲಿಮಿಟೇಷನ್ ಹೆಸರಿನಲ್ಲಿ ದಕ್ಷಿಣ ರಾಜ್ಯಗಳ ರಾಜಕೀಯ ಪ್ರತಿನಿಧಿತ್ವ ಮತ್ತು ಕೇಂದ್ರದ ಮಟ್ಟದಲ್ಲಿನ ಶಕ್ತಿ ಕ್ಷೀಣಿಸುವ ಆತಂಕವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.
ಆದ್ದರಿಂದ ನಾವು ಮಹಿಳಾ ವಿರೋಧಿಗಳೆಂದು ಬಿಂಬಿಸುವುದು ತಪ್ಪು. ನಮ್ಮ ವಿರೋಧ ಮಹಿಳಾ ಮೀಸಲಾತಿಗೆ ಅಲ್ಲ, ಅದನ್ನು ರಾಜಕೀಯ ಹಿತಾಸಕ್ತಿಗೆ ಬಳಸುವ ವಿಧಾನಕ್ಕೆ. 2023ರಲ್ಲಿ ಅಂಗೀಕರಿಸಿದ ಮಹಿಳಾ ಮೀಸಲಾತಿ ಮಸೂದೆಯನ್ನು ಯಾವುದೇ ಷರತ್ತುಗಳಿಲ್ಲದೆ ಯಥಾವತ್ತಾಗಿ ಜಾರಿಗೊಳಿಸಬೇಕು ಎಂಬುದೇ ನಮ್ಮ ಆಗ್ರಹ.
ಮಹಿಳೆಯರ ಹಕ್ಕು, ಸಮಾನತೆ ಮತ್ತು ರಾಜಕೀಯ ಪಾಲ್ಗೊಳ್ಳುವಿಕೆಗೆ ಕಾಂಗ್ರೆಸ್ ಪಕ್ಷ ಎಂದಿಗೂ ಬದ್ಧವಾಗಿತ್ತು, ಇಂದೂ ಇದೆ, ಮುಂದೆಯೂ ಇರುತ್ತದೆ. ಮಹಿಳಾ ಸಬಲೀಕರಣದ ಹೆಸರಿನಲ್ಲಿ ವಿಳಂಬ ಮತ್ತು ರಾಜಕೀಯ ಲೆಕ್ಕಾಚಾರ ಬೇಡ; ತಕ್ಷಣ ಜಾರಿ ಬೇಕು ಎಂಬುದೇ ನಮ್ಮ ನಿಲುವು.
Laxmi News 24×7