ಮುಂಬೈ: ಬಾಲಿವುಡ್ ನಟಿ ಕಂಗನಾ ರಾಣಾವತ್ ಅವರ ಮಣಿಕರ್ಣಿಕಾ ಕಚೇರಿಯ ಡೆಮಾಲಿಷನ್ ಗೆ ಬಾಂಬೆ ಹೈಕೋರ್ಟ್ ತಡೆ ನೀಡಿದೆ.
ಕಂಗನಾ ರಾಣಾವತ್ ಅವರು, ಅನಧಿಕೃತವಾಗಿ ಕಚೇರಿ ನಿರ್ಮಿಸಿದ್ದಾರೆ ಎಂದು ಬೃಹತ್ ಮುಂಬೈ ಕಾರ್ಪೊರೇಷನ್ ನೋಟಿಸ್ ನೀಡಿತ್ತು. ಆ ಬೆನ್ನಲ್ಲೇ ಇಂದು ಕಚೇರಿ ನೆಲಸಮಗೊಳಿಸಲು ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಸದ್ಯ ಈ ಕಾರ್ಯಕ್ಕೆ ನ್ಯಾಯಾಲಯ ತಡೆ ನೀಡಿದ್ದು, ಕಂಗನಾ ಸಲ್ಲಿಸಿರುವ ಅರ್ಜಿಗೆ ಉತ್ತರಿಸುವಂತೆ ಬಿಎಂಸಿಗೆ ಹೇಳಿದೆ.
ಈ ಜಾಗದಲ್ಲಿ ಅನಧಿಕೃತವಾಗಿ ಕಚೇರಿ ನಿರ್ಮಿಸಲಾಗಿದೆ ಎಂದು ಬೃಹತ್ ಮುಂಬೈ ಕಾರ್ಪೊರೇಷನ್ ಕಂಗನಾ ಅವರ ಕಚೇರಿ ಮುಂಭಾಗದಲ್ಲಿ ಸ್ಟೇ ವರ್ಕ್ ನೋಟಿಸ್ ಅಂಟಿಸಿತ್ತು. ಇದಕ್ಕೆ ಕಂಗನಾ ಅವರ ವಕೀಲರು ಪ್ರತಿಕ್ರಿಯಿಸಿ, ನೀವು ನಿರ್ಮಾಣ ಕಾಮಗಾರಿ ನಿಲ್ಲಿಸಿ ಎಂದು ನೋಟಿಸ್ನಲ್ಲಿ ಹೇಳಿದ್ದೀರಿ. ಆದ್ರೆ ಇಲ್ಲಿ ಕಂಗನಾ ರಣಾವತ್ರಿಂದ ಯಾವುದೇ ನಿರ್ಮಾಣ ಕಾರ್ಯ ನಡೆಯುತ್ತಿಲ್ಲ. ಹೀಗಾಗಿ ಈ ನೋಟಿಸ್ ಕಾನೂನಿನ ದೃಷ್ಟಿಯಲ್ಲಿ ತಪ್ಪು. ನಿಮ್ಮ ಅಧಿಕಾರ ಬಳಸಿಕೊಂಡು ಕಂಗನಾರನ್ನು ಬೆದರಿಸಲು ಈ ರೀತಿ ಮಾಡಿದ್ದೀರಿ ಎಂದಿದ್ದರು.
ಡೆಮಾಲಿಷನ್ ಮಾಡುತ್ತಿರುವುದರ ವಿರುದ್ಧ ಕಂಗನಾ ಪರ ವಕೀಲರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಸದ್ಯ ಮೇಲಿನ ಆದೇಶ ನೀಡಿ ಅರ್ಜಿ ವಿಚಾರಣೆಯನ್ನ ಕೋರ್ಟ್ ನಾಳೆಗೆ ಮುಂದೂಡಿದೆ.
ಇದೇ ವಿಚಾರವಾಗಿ ನಟಿ ಕಂಗನಾ ಪ್ರತಿಕ್ರಿಯಿಸಿದ್ದು, ನನ್ನ ಮನೆಯಲ್ಲಿ ಯಾವುದೇ ಕಾನೂನು ಬಾಹಿರ ಕಟ್ಟಡ ನಿರ್ಮಿಸಿಲ್ಲ. ಕೊರೊನಾ ಕಾರಣದಿಂದಾಗಿ ಸರ್ಕಾರ ಯಾವುದೇ ಕಟ್ಟಡ ಕೆಡವುದಂತೆ ಸೆ. 30 ರ ತನಕ ತಡೆ ನೀಡಿದೆ. ಹಾಗಿದ್ರು ನನ್ನ ಕಚೇರಿ ಕೆಡವಲಾಗುತ್ತಿದೆ. ನಿಜವಾದ ಫ್ಯಾಸಿಸಂ(ದಬ್ಬಾಳಿಕೆ) ಅಂದ್ರೆ ಇದೇ ನೋಡಿ ಅಂತಾ ಮಹರಾಷ್ಟ್ರ ಸರ್ಕಾರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚಿಗೆ ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರ ಎಂದಿದ್ದರು. ಇದಾದ ಬಳಿಕ ಕೇಂದ್ರ ಸರ್ಕಾರ ಅವರಿಗೆ ವೈ ದರ್ಜೆ ಭದ್ರತೆ ಒದಗಿಸಿದೆ.