ಮಂಗಳೂರು ಹೊರವಲಯದ ಸುರತ್ಕಲ್ನ ರಹೇಜಾ ಅಪಾರ್ಟ್ಮೆಂಟ್ನಲ್ಲಿ ರಮೇಶ್ ಹಾಗೂ ಗುಣಾ ದಂಪತಿಗಳ ಆತ್ಮಹತ್ಯೆ ಪ್ರಕರಣ ಆತಂಕವನ್ನು ಮೂಡಿಸಿತ್ತು. ಡೆತ್ನೋಟ್ ನಲ್ಲಿ ಕೊರೊನಾ ಹಾಗೂ ಬ್ಲ್ಯಾಕ್ ಫಂಗಸ್ಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿಟ್ಟಿದ್ದರು. ಇದರ ಬೆನ್ನಲ್ಲೇ ಇದೀಗ ಮೃತದೇಹದ ಪರೀಕ್ಷೆಯನ್ನು ನಡೆಸಲಾಗಿದ್ದು, ಕೊರೊನಾ ನೆಗೆಟಿವ್ ವರದಿ ಬಂದಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪಡುಬಿದ್ರಿ ಮೂಲದ ರಮೇಶ್ ಸುವರ್ಣ ಹಾಗೂ ಗುಣಾ ಆರ್. ಸುವರ್ಣ ದಂಪತಿ ಮನೆಯವರಿಗೆ ಕೊರೊನಾ ಸೋಂಕು ಬಂದ ಭೀತಿಯ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿ ರುವ ಸಾಧ್ಯತೆಯಿದೆ. ಮಗು ಇಲ್ಲ ಅನ್ನೋ ಕಾರಣಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿ, ಕೊರೊನಾ ಹಾಗೂ ಬ್ಲ್ಯಾಕ್ ಫಂಗಸ್ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಸ್ಥಳಕ್ಕೆ ಸುರತ್ಕಲ್ ಠಾಣೆಯ ಪೊಲೀಸರು ಭೇಟಿಯನ್ನು ನೀಡಿ ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಪ್ಲ್ಯಾಟ್ನ ಹಾಲ್ನಲ್ಲಿ ದಂಪತಿ ಪ್ರತ್ಯೇಕವಾಗಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಲ್ನಲ್ಲಿ ಟಿವಿ ಆನ್ ಆಗಿದ್ದು, ಎದುರಿಗೆ ಇರುವ ಟೇಬಲ್ ಮೇಲೆಯೇ ಹಣ ಹಾಗೂ ಡೆತ್ನೋಟ್ ಬರೆದಿಡಲಾಗಿದೆ.
ರಮೇಶ್ ಹಾಗೂ ಗುಣಾ ದಂಪತಿ ಸಾವಿನ ಕುರಿತು ಪೊಲೀಸರು ಅಪಾರ್ಟ್ಮೆಂಟ್ ನಿವಾಸಿಗಳಿಂದ ಹಾಗೂ ಸಂಬಂಧಿಕರಿಂದಲೂ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಕೊರೊನಾ ಭಯ ಮಾತ್ರವಲ್ಲದೇ ಬೇರೆಯ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅನ್ನೋ ಬಗ್ಗೆಯೂ ತನಿಖೆ ನಡೆಯುತ್ತಿದೆ.