ಬೆಳಗಾವಿ: ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟರೆ ನನಗೆ ಬೇಡ. ನಾನು ಕೆಳಗೆ ಬರೋದಿಲ್ಲ. ಮೇಲಿನ ಸ್ಥಾನ ಕೊಟ್ಟರೆ ನಿಭಾಯಿಸುವೆ. ಅದು ಪಕ್ಷಕ್ಕೂ ಸರಿ ಅಲ್ಲ, ನನಗೂ ಸರಿಯಲ್ಲ ಅಂತ ಬೆಳಗಾವಿಯಲ್ಲಿ ಶಾಸಕ ಶ್ರೀಮಂತ ಪಾಟೀಲ್ (Shrimant Patil) ಹೇಳಿದ್ದಾರೆ. ಇನ್ನು ಮರಾಠಾ ಸಮುದಾಯಕ್ಕೆ ಸಚಿವ ಸ್ಥಾನ ಸಿಗದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ, ಸಾಕಷ್ಟು ಸಮಯವಿದೆ, ಸಚಿವ ಸ್ಥಾನ ಕೊಡಬಹುದು. ಮರಾಠಾ ಸಮುದಾಯದವರು ಬೇಸರ ಮಾಡಿಕೊಳ್ಳಬೇಡಿ. 4 ದಿನದಲ್ಲಿ ನಿರ್ಧಾರ ಆಗುತ್ತೆ, ಜವಾಬ್ದಾರಿ ಕೊಡುತ್ತಾರೆ. ನನಗೆ ಸಚಿವ ಸ್ಥಾನ ನೀಡದಿದ್ದಕ್ಕೆ ಏನೂ ಕಾರಣ ಹೇಳಿಲ್ಲ.
ನನಗೆ ಬೇರೆ ಜವಾಬ್ದಾರಿ ಕೊಡುವುದಾಗಿ ಸಿಎಂ ಹೇಳಿದ್ದಾರೆ ಎಂದು ತಿಳಿಸಿದರು.
ಪಕ್ಷದ ಮುಖಂಡರು ನಮಗೆ ಏನು ಜವಾಬ್ದಾರಿ ವಹಿಸುತ್ತಾರೋ ಅದನ್ನ ಸರಿಯಾಗಿ ನಿಭಾಯಿಸುತ್ತೇವೆ. ಪಕ್ಷದಿಂದ ನಮಗೆ ಯಾವುದೇ ಅನ್ಯಾಯ ಆಗಲ್ಲ ಅಂತಾ ಪೂರ್ಣ ಭರವಸೆ ಇದೆ. ಸಚಿವ ಸ್ಥಾನ ಸಿಕ್ಕಿಲ್ಲ ಅಂತಾ ನಮಗೇನೂ ದೊಡ್ಡ ಆಘಾತವಾಗಿಲ್ಲ. ಬೇರೆ ಜವಾಬ್ದಾರಿ ಕೊಡಬಹುದು. ನಾಲ್ಕು ದಿನ ಸಚಿವ ಸ್ಥಾನ ಕೊಟ್ಟಿಲ್ಲ ಅಂದ್ರೆ ಕೈ ಬಿಟ್ಟಂಗಲ್ಲ ಅಂತ ಶಾಸಕರು ಅಭಿಪ್ರಾಯಪಟ್ಟರು.
ಕೇಳಿದ ಖಾತೆ ಕೊಡದಿದ್ದಕ್ಕೆ ಆನಂದ್ ಸಿಂಗ್ (Anand Singh) ಕ್ಯಾತೆ ತೆಗೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕ ಶ್ರೀಮಂತ ಪಾಟೀಲ್, ಎಲ್ಲ ಖಾತೆ ದೊಡ್ಡದು, ಸಣ್ಣದು ಎಂದು ಇರುವುದಿಲ್ಲ. ಕೊಟ್ಟ ಖಾತೆಯನ್ನು ನಿಭಾಯಿಸಿಕೊಂಡು ಹೋಗಬೇಕು ಅಂತ ಸಲಹೆ ನೀಡಿದರು.
ಬಿ.ಎಸ್.ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು ದೊಡ್ಡ ನಿರ್ಧಾರ. ಪ್ರಧಾನಿ ಮೋದಿ, ರಾಷ್ಟ್ರೀಯ ಅಧ್ಯಕ್ಷರು, ದೆಹಲಿ ಹೈಕಮಾಂಡ್ ತೆಗೆದುಕೊಂಡ ದೊಡ್ಡ ನಿರ್ಧಾರ. ಅವರು ತಗೆದುಕೊಂಡ ನಿರ್ಧಾರ ತಪ್ಪು ಅಂತಾ ಹೇಳೋಕೆ ಆಗಲ್ಲ ಎಂದು ಮಾತನಾಡಿದ ಶ್ರೀಮಂತ ಪಾಟೀಲ್, ನನಗೆ ಹಿಂದೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಜವಳಿ ಇಲಾಖೆ ಕೊಟ್ಟಿದ್ರು. ಅಲ್ಪಸಂಖ್ಯಾತ ಸಮುದಾಯ ಪಕ್ಷದತ್ತ ಬರುತ್ತಿದ್ದಾರೆ. ಅದು ದೊಡ್ಡ ಕೆಲಸ. ನಾವು ಗಡಿಬಿಡಿ ಮಾಡಬಾರದು ಕಾದು ನೋಡಬೇಕಷ್ಟೆ ಎಂದು ಹೇಳಿದರು.