ಕೋಲಾರ: ಮೂರನೇ ತಾರೀಖಿನಿಂದ ಮದ್ಯದಂಗಡಿ ತೆರೆಯುವ ಚಿಂತನೆ ಇತ್ತು. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಇದಕ್ಕೆ ಒಪ್ಪಿಲ್ಲ. ಹೀಗಾಗಿ ಸದ್ಯಕ್ಕೆ ಮದ್ಯದಂಗಡಿ ತೆರೆಯೋದು ಸಾಧ್ಯವಿಲ್ಲ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ನಡೆಸಿದ ಸಂದರ್ಭದಲ್ಲಿ ಕೆಲ ರಾಜ್ಯಗಳ ಸಿಎಂಗಳು ಈ ಕುರಿತು ಕೇಳಿದ್ದಾರೆ. ಈ ವೇಳೆ ಪ್ರಧಾನಿ ಮೋದಿಯವರು ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಹೀಗಾಗಿ ನಾವು ಮೂರನೇ ತಾರೀಖಿನಿಂದ ಮದ್ಯದಂಗಡಿ ತೆರೆಯುವ ಚಿಂತನೆ ಇದ್ದರೂ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಮೋದಿ ಅವರ ನಿರ್ಧಾರದ ವರೆಗೂ ಮದ್ಯದಂಗಡಿ ತೆರಯಲು ಅವಕಾಶ ಇಲ್ಲ ಎಂದರು.
ಮದ್ಯ ವ್ಯಸದನಿಗಳು ಮಾನಸಿಕವಾಗಿ ಕುಗ್ಗದೆ ವೈದ್ಯರ ಸಲಹೆ ಹಾಗೂ ಚಿಕಿತ್ಸೆ ಪಡೆಯಲು ಸೂಚನೆ ನೀಡಿದ್ದೇನೆ ಅದರಂತೆ ಒಂದಷ್ಟು ಜನ ನನ್ನ ಮನವಿಯನ್ನು ಪಾಲಿಸುತ್ತಿದ್ದಾರೆ, ಅದು ಖುಷಿ ತಂದಿದೆ. ನಮ್ಮದು ಗಡಿ ಜಿಲ್ಲೆಯಾದ್ದರಿಂದ ಗ್ರೀನ್ ಝೋನ್ನಲ್ಲಿದೆ ಎಂದ ಮಾತ್ರಕ್ಕೆ ಸಡಿಲಿಕೆ ನೀಡಲು ಸಾಧ್ಯವಿಲ್ಲ. ಇದರಿಂದ ಅಕ್ಕಪಕ್ಕದ ಜಿಲ್ಲೆಗಳವರು ಹಾಗೂ ಹೊರ ರಾಜ್ಯದವರು ನುಸುಳುತ್ತಾರೆ. ಹೀಗಾಗಿ ಕೆಲ ನಿರ್ಬಂಧಗಳನ್ನು ಹೇರಲಾಗುತ್ತದೆ ಎಂದರು.
ಗ್ರೀನ್ ಝೋನ್ನಲ್ಲಿರುವುದರಿಂದ ಕೋಲಾರದಲ್ಲಿ ಸ್ವಲ್ಪ ಮಟ್ಟಿಗೆ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ. ಕಾರ್ಖಾನೆಗಳು ನಿಬಂಧನೆಗಳಿಗೆ ಒಳಪಟ್ಟು ತೆರೆಯಲು ಅವಕಾಶ ಮಾಡಿಕೊಡಲಾಗುತ್ತಿದೆ. ಕೈಗಾರಿಕೆಗಳಲ್ಲಿ ಅರ್ಧದಷ್ಟು ಸಿಬ್ಬಂದಿ ಇಟ್ಟುಕೊಂಡು ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕಾರ್ಮಿಕರಿಗೆ ಸ್ಥಳೀಯವಾಗಿ ಮೂಲಭೂತ ಸೌಲಭ್ಯಗಳನ್ನು ಉದ್ಯಮದಾರರೇ ಒದಗಿಸಬೇಕಾಗಿದೆ. ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದ್ದು, ಅದರಲ್ಲಿ ಕೆಲವು ತಿದ್ದುಪಡಿ ತರಲು ಚಿಂತಿಸಲಾಗಿದೆ. ದೊಂಬಿಯಾಗದಂತೆ ಪ್ರತಿ ದಿನ ಆಲ್ಟರ್ ನೆಟ್ ಶಾಪ್ಗಳನ್ನು ತೆರೆಯುವಂತೆ ನಿಯಮ ತರಲಾಗುತ್ತಿದೆ. ಯಾವುದೇ ಕಾರಣಕ್ಕೂ ವಾಹನ ಸಂಚಾರಕ್ಕೆ ಅವಕಾಶ ಇಲ್ಲ. ಹೋಟೆಲ್ಗಳಲ್ಲಿ ಕೇವಲ ಪಾರ್ಸೆಲ್ಗೆ ಮಾತ್ರ ಅವಕಾಶವಿದೆ, ಉಳಿದಂತೆ ಬೇಕರಿ, ಮಟನ್, ಫಿಶ್ ಅಂಗಡಿಗಳಿಗೆ ಅವಕಾಶವಿದೆ ಎಂದು ತಿಳಿಸಿದರು.