ನವದೆಹಲಿ: ಮದುವೆಯಾದರೂ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಸಬ್ಇನ್ಸ್ಪೆಕ್ಟರ್ ಒಬ್ಬ ಆಕೆಯ ಮೇಲೆ ಗುಂಡುಹಾರಿಸಿ ಕಾರಿನಿಂದ ತಳ್ಳಿರುವ ಭಯಾನಕ ಘಟನೆ ದೆಹಲಿಯಲ್ಲಿ ನಡೆದಿದೆ.
ಅದೇ ಸಮಯದಲ್ಲಿ ಸ್ಥಳಕ್ಕೆ ಆಗಮಿಸಿರುವ ಇನ್ನೊಬ್ಬ ಪೊಲೀಸ್ ಅಧಿಕಾರಿ ಆ ಮಹಿಳೆಯ ಜೀವ ಉಳಿಸಿದ್ದಾರೆ. ರಸ್ತೆಯಲ್ಲಿ ಗಾಯಗೊಂಡು ಬಿದ್ದಿದ್ದ ಮಹಿಳೆಯನ್ನು ಆ ಪೊಲೀಸ್ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿದ್ದಾರೆ.
ಇಂಥ ಕುಕೃತ್ಯ ಎಸಗಿದ ಸಬ್ಇನ್ಸ್ಪೆಕ್ಟರ್ ಹೆಸರು ಸಂದೀಪ್ ದಹಿಯ. ನವದೆಹಲಿಯ ಅಲೀಪುರದ ನಿವಾಸಿಯಾಗಿರುವ ಈತ ವಿವಾಹಿತ. ಈತ ಹಾಗೂ ಈತನ ಪತ್ನಿಯ ದಾಂಪತ್ಯ ಜೀವನ ಸರಿಯಿರಲಿಲ್ಲ. ಸದಾ ಹೆಂಡತಿಯ ಜತೆ ಜಗಳವಾಡುತ್ತಿದ್ದ ಈತನಿಗೆ ವಿಚ್ಛೇದನ ನೀಡಲು ಪತ್ನಿ ಬಯಸಿದ್ದರು. ಈ ನಡುವೆಯೇ ಸಂದೀಪ್ ಇನ್ನೊಬ್ಬಳ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ.
ನಿನ್ನೆ ಗೆಳತಿಯನ್ನು ಕರೆದುಕೊಂಡು ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಇಬ್ಬರ ನಡುವೆ ಕಾರಿನಲ್ಲಿ ಜಗಳವಾಗಿದೆ. ಜಗಳ ಅತಿರೇಕಕ್ಕೆ ಹೋಗಿದೆ. ಆಗ ಕೋಪದಿಂದ ಸಂದೀಪ್ ಗೆಳತಿಯ ಮೇಲೆ ಗುಂಡು ಹಾರಿಸಿ, ಚಲಿಸುವ ಕಾರಿನಿಂದ ರಸ್ತೆಗೆ ತಳ್ಳಿದ್ದಾನೆ. ರಭಸವಾಗಿ ಕೆಳಗೆ ಬಿದ್ದಿದ್ದರಿಂದ ಆಕೆಗೆ ಅನೇಕ ಗಾಯಗಳಾಗಿವೆ.
ಆದರೆ ಅದೃಷ್ಟವಶಾತ್ ಅದೇ ವೇಳೆ ಕಚೇರಿಗೆ ಹೋಗುತ್ತಿದ್ದ ಶಾಹ್ಬಾದ್ ಡೈರಿ ಪೊಲೀಸ್ ಠಾಣೆಯ ಎಸ್ಐ ಜೈವೀರ್ ಎಂಬುವವರು ಬಿದ್ದಿದ್ದ ಮಹಿಳೆಯನ್ನು ನೋಡಿ ಆಸ್ಪತ್ರೆಗೆ ಸೇರಿಸಿದ್ದಾರೆ.
ಸದ್ಯಕ್ಕೆ ಮಹಿಳೆಯ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ಮಹಿಳೆಯ ಹೇಳಿಕೆ ಪಡೆದುಕೊಳ್ಳಲಾಗಿದೆ. ಘಟನೆ ನಂತರ ಸಂದೀಪ್ ದಹಿಯಾ ಪರಾರಿಯಾಗಿದ್ದು, ಹುಡುಕಾಟ ನಡೆದಿದೆ ಎಂದು ದೆಹಲಿ ಉತ್ತರ ವಿಭಾಗದ ಡಿಸಿಪಿ ಗೌರವ್ ಶರ್ಮ ತಿಳಿಸಿದ್ದಾರೆ.