ನವದೆಹಲಿ : ಇಂದು ದೆಹಲಿಯಲ್ಲಿ ನಡೆದ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ನಡೆದಿಲ್ಲ, ಕರೊನಾ ಮತ್ತು ಐದು ರಾಜ್ಯಗಳ ಚುನಾವಣೆ ಬಗ್ಗೆ ಮಾತ್ರ ಚರ್ಚೆಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರವಿ, ಯಡಿಯೂರಪ್ಪ ಅವರನ್ನು ಸರ್ವಾನುಮತದಿಂದ ಸಿಎಂ ಆಗಿ ಆಯ್ಕೆ ಮಾಡಿದ್ದೇವೆ. ಆದರೆ ಆಗಾಗ ಸಿಎಂ ಬದಲಾವಣೆ ರೀತಿಯ ಹೇಳಿಕೆಗಳು ಬರುತ್ತಿವೆ. ಹೇಳಿಕೆ ನೀಡಿದವರ ವಿರುದ್ಧ ಹೇಳಿಕೆ ಕೊಡಲ್ಲ ಎಂದರು.
ಕರೊನಾ ಸಂಕಷ್ಟದಲ್ಲಿ ಬಿಜೆಪಿ ಜನರೊಂದಿಗೆ ಇದೆ. ಬಿಜೆಪಿ ಅಧಿಕಾರಕ್ಕೆ ಬಂದು ಏಳು ವರ್ಷಗಳು ಆಗಿವೆ. ಆದರೆ ಸಂಭ್ರಮಾಚರಣೆ ಮಾಡದೆ ದೇಶಾದ್ಯಂತ ಸೇವೆ ಮಾಡಿದ್ದೇವೆ. ಜನರು ಮತ್ತೆ ಜೀವನ ಕಟ್ಟಿಕೊಳ್ಳಬೇಕಿದೆ. ಇಂದು ನಡೆದ ಪಕ್ಷದ ಸಭೆಯಲ್ಲಿ ಈ ಬಗ್ಗೆ ಗಂಭೀರ ಚರ್ಚೆಯಾಗಿದೆ. ಗ್ರಾಮಗಳಲ್ಲಿ ಆರೋಗ್ಯ ಸೇವೆ ನೀಡುವ ಬಗ್ಗೆ ಮತ್ತು ಆರ್ಥಿಕ ಪುನಶ್ಚೇತನ, ಉದ್ಯೋಗ ಸೃಷ್ಟಿ ಬಗ್ಗೆ ಚಿಂತನೆ ನಡೆದಿದೆ ಎಂದರು.
ಕಾಂಗ್ರೆಸ್ ಟೂಲ್ಕಿಟ್ ಪಾರ್ಟಿಯಾಗಿದೆ: ಕಾಂಗ್ರೆಸ್ನವರು ಅಧಿಕಾರದಲ್ಲಿದ್ದಾಗ ಸೂಟ್ಕೇಸ್ ತುಂಬುವ ಕೆಲಸ ಮಾಡುತ್ತಿದ್ದರು, ಈಗ ದೇಶದಲ್ಲಿ ಅರಾಜಕತೆ ಸೃಷ್ಟಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಟೂಲ್ ಕಿಟ್ ಪಾರ್ಟಿಯಾಗಿದೆ ಎಂದು ಟೀಕಿಸಿದ ಸಿ.ಟಿ.ರವಿ, ‘ಪ್ರಾರಂಭದಲ್ಲಿ ವ್ಯಾಕ್ಸಿನ್ ವಿರುದ್ಧ ಅಪಪ್ರಚಾರ ನಡೆಸಿದ್ರು, ಈಗ ವ್ಯಾಕ್ಸಿನ್ ಕೊಡಿ ಎಂದು ಕೇಳುತ್ತಿದ್ದಾರೆ. ಎಲ್ಲರಿಗೂ ಹಂತಹಂತವಾಗಿ ವ್ಯಾಕ್ಸಿನ್ ನೀಡಲಿದ್ದೇವೆ. ಆದ್ಯತಾ ವಲಯವನ್ನು ಗುರುತಿಸಿ ಲಸಿಕೆ ನೀಡಬೇಕಿದೆ’ ಎಂದರು. ಕೆಲವು ಸಮುದಾಯಗಳಲ್ಲಿ ಲಸಿಕೆ ಬಗ್ಗೆ ಭಯವಿದೆ. ಅಪಪ್ರಚಾರ ಹೋಗಲಾಡಿಸಿ ಜನರಲ್ಲಿ ನಂಬಿಕೆ ಮೂಡಿಸಬೇಕಿದೆ ಎಂದರು.
ಐದು ರಾಜ್ಯಗಳ ಚುನಾವಣೆ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದ್ದು, ತಮಿಳುನಾಡಿನಲ್ಲಿ ನಾಲ್ಕು ಸೀಟು ಗೆದ್ದಿರುವುದಕ್ಕೆ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಅಭಿನಂದಿಸಿದರು. ಪಶ್ಚಿಮ ಬಂಗಾಳದಲ್ಲಿನ ಚುನಾವಣೋತ್ತರ ಹಿಂಸೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ರವಿ ವಿವರಿಸಿದರು.