ಶಿವಮೊಗ್ಗ: ಪೆಟ್ರೋಲ್, ಡೀಸೆಲ್ ದರ ಏರಿಸುವುದು, ಇಳಿಸುವುದು ಕೇಂದ್ರ ಸರಕಾರದ ತೀರ್ಮಾನ. ಯಾಕೆ ಏನು, ಏನು ಕಥೆ ಎಂದು ನನಗೆ ಗೊತ್ತಿಲ್ಲ ಎಂದು ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕೆಲವು ಸಂದರ್ಭದಲ್ಲಿ ಏರಿಸುತ್ತಾರೆ, ಕೆಲವು ಸಂದರ್ಭದಲ್ಲಿ ಇಳಿಸುತ್ತಾರೆ. ಕೇವಲ ಪೆಟ್ರೋಲ್ ಡೀಸೆಲ್ ಅಷ್ಟೇ ಅಲ್ಲ. ಎಲ್ಲಾ ಪದಾರ್ಥಗಳಿಗೆ ಈ ವ್ಯವಸ್ಥೆ ಇರುತ್ತೆದೆ. ಕಾರಣಗಳು ಕೇಂದ್ರದ ಅರ್ಥ ಸಚಿವರಿಗೆ ಗೊತ್ತಿರುತ್ತದೆ. ಆಡಳಿತ ನಡೆಸುವ ಸಂದರ್ಭದಲ್ಲಿ ಮಾಡುತ್ತಾರೆ ಎಂದರು.
ಕೋವಿಡ್ ನಿಯಂತ್ರಣದಲ್ಲಿ ಸರ್ಕಾರ ವಿಫಲ ಎಂಬ ಕಾಂಗ್ರೆಸ್ ಟೀಕೆಗೆ ಉತ್ತರಿಸಿದ ಅವರು, ರಾಜಸ್ಥಾನ, ಪಂಜಾಬ್ ರಾಜ್ಯಗಳಲ್ಲಿ ಅವರದೇ ಪಕ್ಷ ಆಡಳಿತ ನಡೆಸುತ್ತಿದೆ. ಅಲ್ಲಿ ಎಷ್ಟರ ಮಟ್ಟಿಗೆ ಕೋವಿಡ್ ನಿಯಂತ್ರಣದಲ್ಲಿದೆ ಎಂದು ನೋಡಿಕೊಂಡು ಬರಲಿ ಎಂದು ತಿರುಗೇಟು ನೀಡಿದರು.
ರಾಜ್ಯ, ಕೇಂದ್ರ ಸರ್ಕಾರಗಳು ಕೋವಿಡ್ ನಿಯಂತ್ರಣಕ್ಕೆ ಸಾಕಷ್ಟು ಕೆಲಸ ಮಾಡುತ್ತಿವೆ. ಆದರೆ ವಿರೋಧ ಪಕ್ಷದವರು ಕೇವಲ ಟೀಕೆಗಾಗಿ ಟೀಕೆ ಮಾಡುತ್ತಿದ್ದಾರೆ. ಲಸಿಕೆ ವಿಚಾರದಲ್ಲೂ ಇಲ್ಲ ಸಲ್ಲದ ಆರೋಪ ಮಾಡಿದ್ದರು. ಹೀಗಾಗಿಯೇ ಜನರು ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರಲಿಲ್ಲ. ರಾಜ್ಯದಲ್ಲಿ ಕೋವಿಡ್ ಹರಡಲು ಕಾಂಗ್ರೆಸ್ ನ ಅಪಪ್ರಚಾರವೇ ನೇರ ಕಾರಣ ಎಂದು ಈಶ್ವರಪ್ಪ ಹೇಳಿದರು.