ಬೆಂಗಳೂರು: ಬೆಂಗಳೂರಿಗೆ ಸೇರಿದ ಹಲವು ಸಚಿವರು ಇದ್ದರೂ ಬೆಂಗಳೂರು ಉಸ್ತುವಾರಿ ಯಾರು ಎನ್ನುವುದೇ ಈಗಿರುವ ಪ್ರಶ್ನೆ. ಮಹತ್ವವಾದ ಬೆಂಗಳೂರು ಉಸ್ತುವಾರಿ ಖಾತೆಯನ್ನು ಮುಖ್ಯಮಂತ್ರಿ ಹೊಂದಿದ್ದು, ಅವರಿಗೆ ಬೇರೆ ಹೊಣೆಯೇ ಹೆಚ್ಚಿರಬೇಕಾದರೆ ಮತ್ತು ಅವರಿಗೆ ಎರಡು ಬಾರಿ ಕೊವಿಡ್ ಬಂದು ಆಸ್ಪತ್ರೆ ಸೇರಿರಬೇಕಾದರೆ ಈ ಮಹಾಸಮರದ ವಿರುದ್ಧದ ನೇತೃತ್ವ ವಹಿಸಬೇಕಾದ ನಾಯಕರೇ ಇಲ್ಲವಾಗಿದ್ದಾರೆ ಎಂಬ ಅಂಶವನ್ನು ತಮ್ಮ ಸಲಹಾ ಪಟ್ಟಿಯಲ್ಲಿ ಸೇರಿಸುವ ಮೂಲಕ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಟಾಂಗ್ ಕೊಟ್ಟಿದ್ದಾರೆ.
ರಾಮಲಿಂಗಾರೆಡ್ಡಿ ಸಲಹೆಗಳು..
- ಕೋವಿಡ್ ನಿಯಮಗಳ ಉಲ್ಲಂಘಿಸುವ ವಾಣಿಜ್ಯ ವಹಿವಾಟು ಮುಂಗಟ್ಟುಗಳ ಮೇಲೆ ಕಟ್ಟು ನಿಟ್ಟಾಗಿ ದಂಡ ವಿಧಿಸಬೇಕು.
- ಮದುವೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಿಯಮ ಉಲ್ಲಂಘನೆ ಆಗದಂತೆ ತಡೆಗಟ್ಟಲು ಕೋವಿಡ್ ಜಾಗೃತ ದಳಗಳ ರಚನೆ ಅಗತ್ಯವಾಗಿದೆ.
- ಖಾಲಿ ಇರುವ ಕಲ್ಯಾಣ ಮಂಟಪ, ಸಮುದಾಯ ಭವನಗಳು, ದೊಡ್ಡ ದೊಡ್ಡ ಪ್ರದರ್ಶನ ಸಭಾಂಗಣ ಗಳನ್ನೂ ತಾತ್ಕಾಲಿಕ ಆಸ್ಪತ್ರೆಗಳಾಗಿ ಪರಿವರ್ತಿಸಿ, ಅಗತ್ಯ ಸಿಬ್ಬಂದಿಗಳನ್ನು ತಕ್ಷಣ ನೇಮಕ ಮಾಡಬೇಕು.
- ಬೆಂಗಳೂರಿನ ಕೊಳಚೆ ಪ್ರದೇಶಗಳು, ಬಡವರು, ಕೆಳಮಧ್ಯಮ ವರ್ಗದ ಜನ ವಾಸಿಸುವ ಪ್ರದೇಶಗಳಲ್ಲಿ ರೋಗ ಹಬ್ಬದಂತೆ ಈಗಲೇ ಅಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು.
- ವ್ಯಾಕ್ಸಿನ್ ಕೂಡಾ ಅಷ್ಟೇ ಮುಖ್ಯ, ಈಗಿರುವ ವ್ಯಾಕ್ಸಿನ್ ಕಾರ್ಯಕ್ರಮ ಆಮೆ ಗತಿಯಲ್ಲಿ ಸಾಗುತ್ತಿದ್ದು, ರಾಜಧಾನಿ ಬೆಂಗಳೂರು ಕೋವಿಡ್ ಮುಕ್ತವಾಗಲು ದೊಡ್ಡ ಮಟ್ಟದಲ್ಲಿ ವ್ಯಾಕ್ಸಿನ್ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಇದಕ್ಕಾಗಿ ಸಮರೋಪಾದಿಯಲ್ಲಿ ಕಾರ್ಯ ಯೋಜನೆ ರೂಪಿಸಬೇಕು. ಆದ್ದರಿಂದ ಇದನ್ನು ತ್ವರಿತಗತಿಯಲ್ಲಿ ನಡೆಸಬೇಕು
- ಬೆಂಗಳೂರಿಗಾಗಿಯೇ ಪ್ರತ್ಯೇಕವಾಗಿ ದೊಡ್ಡ ಸಂಖ್ಯೆಯಲ್ಲಿ ವ್ಯಾಕ್ಸಿನ್’ಗಳನ್ನು ಕಳಿಸುವಂತೆ ಕೇಂದ್ರಕ್ಕೆ ಕೋರಬೇಕು.