ಗದಗ: ‘ಇಂದಿನ ರಾಜಕಾರಣದಲ್ಲಿ ಬದ್ಧತೆ ಇಲ್ಲ. ಚುನಾವಣೆ ಮಾಡುವ ಎಲ್ಲ ಪಕ್ಷದವರೂ ಹಣ, ಹೆಂಡ ಹಂಚುತ್ತಾರೆ’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
‘ಇಂತಹ ಕಲುಷಿತ ವಾತಾವರಣದಲ್ಲಿ ನಾವು ಇನ್ನೂ ರಾಜಕಾರಣ ಮಾಡಬೇಕಿದೆ. ಓಟು ಹಾಕುವವರು ಮೂವರಿಂದಲೂ ಪಡೆದುಕೊಂಡು ಒಬ್ಬರಿಗೆ ವೋಟು ಹಾಕಿ ಇನ್ನಿಬ್ಬರಿಗೆ ಟೋಪಿ ಹಾಕುತ್ತಾರೆ. ಟೋಪಿ ಹಾಕಿಸಿಕೊಂಡವನು ಸೋಲುತ್ತಾನೆ. ಎಂದಾರೂ ಆರಿಸಿ ಬಂದರೆ ಅವನು ಎಲ್ಲರಿಗೂ ಟೋಪಿ ಹಾಕುತ್ತಾನೆ. ಇವತ್ತು ದುಡ್ಡಿದ್ದವರದ್ದೇ ರಾಜಕಾರಣವಾಗಿದೆ. ಪಕ್ಷಗಳು ಇಂದು ವ್ಯಕ್ತಿ ನೋಡದೇ ಹಣ ಇದ್ದವನಿಗೆ ಟಿಕೆಟ್ ನೀಡುತ್ತಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.
‘ಕೆಲವರು ಇದೇ ನನ್ನ ಕೊನೆ ಎಲೆಕ್ಷನ್ ಅನ್ನುತ್ತಾರೆ. ಚುನಾವಣೆ ಬಂದ ತಕ್ಷಣ ಮತ್ತೇ ನಿಲ್ಲುತ್ತಾರೆ. ಇದು ಇಂದಿನ ರಾಜಕಾರಣ. ಚುನಾವಣೆ ಎಂಬುದು ರಾಜಕಾರಣಿಗೆ ವ್ಯಸನ ಇದ್ದಂತೆ. ಮಹಾನ್ ನಾಯಕರ ಜತೆಗೆ ರಾಜಕಾರಣ ಮಾಡಿದ ನಾನು ಸ್ವಲ್ಪ ಮಟ್ಟಿಗಾದರೂ ತತ್ವಾದರ್ಶ ಇಟ್ಟುಕೊಂಡಿದ್ದೇನೆ’ ಎಂದು ಹೇಳಿದರು.