ಬೆಳಗಾವಿ(ಫೆ.27): ಕೊರೊನಾ ಸೋಂಕಿನ ಕಾರಣದಿಂದಗಾಗಿ ಜನರಿಗೆ ಕ್ವಾರಂಟೈನ್ ಮಾಡೋದು ಸಾಮಾನ್ಯವಾಗಿದೆ. ಬೇರೆ ಊರಿಂದ ಬಂದ್ರೆ ಅಥವಾ ರೋಗದ ಲಕ್ಷಣ ಇದ್ದವರಿಗೆ ಕ್ವಾರಂಟೈನ್ ಮಾಡುವುದು ಸಹಜ. ಆದರೆ ಬೆಳಗಾವಿಗೆ ಬಂದಿರೋ ಮೂರು ಕಾಡಿನ ರಾಜಗಳಿಗೆ ಅರಣ್ಯಾಧಿಕಾರಿಗಳು ಕ್ವಾರಂಟೈನ್ ಮಾಡಿದ್ದಾರೆ. ಸದ್ಯ ಅವರನ್ನು ನೋಡಲು ಯಾರಿಗೂ ಅವಕಾಶ ಇಲ್ಲ. ಕೇವಲ ಆಹಾರ ನೀಡುವ ಸಿಬ್ಬಂದಿಗೆ ಮಾತ್ರ ಅಲ್ಲಿಗೆ ಪ್ರವೇಶವಿದೆ. ಆದರೆ ಈ ಕಾಡಿನ ರಾಜಗಳನ್ನು ನೋಡಲು ಜನ ಕಾಯುತ್ತಿದ್ದಾರೆ.
ಬೆಳಗಾವಿಯ ಭೂತರಾಮನಹಟ್ಟಿ ಗ್ರಾಮದ ಬಳಿ ರಾಣಿ ಚನ್ನಮ್ಮ ಪ್ರಾಣಿ ಸಂಗ್ರಹಾಲಯವಿದೆ. ಇಲ್ಲಿಗೆ ಇದೀಗ ಮೂರು ಸಿಂಹಗಳನ್ನು ತಂದು ಬಿಡಲಾಗಿದೆ. ಬೆಂಗಳೂರಿನ ಬನ್ನೇರುಘಟ್ಟದಿಂದ ಎರಡು ಗಂಡು ಹಾಗೂ ಒಂದು ಹೆಣ್ಣು ಸಿಂಹವನ್ನು ತಂದು ಬಿಡಲಾಗಿದೆ. ವಾತಾವರಣ, ಆಹಾರ ಹೊಂದಾಣಿಕೆ ಆಗೋ ಸಲುವಾಗಿ ಇದೀಗ ಮೂರು ಸಿಂಹಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಇದೇ ಸಂಗ್ರಹಾಲಯದಲ್ಲಿ ಪ್ರತ್ಯೇಕವಾಗಿ ಮೂರು ಸಿಂಹಗಳಿಗೆ ಇಡಲಾಗಿದೆ. ಇಲ್ಲಿ ಯಾರಿಗೂ ಪ್ರವೇಶ ನೀಡಿಲ್ಲ, 15 ದಿನ ಈ ಕ್ವಾರಂಟೈನ್ ಅವಧಿಯನ್ನು ಅಧಿಕಾರಿಗಳು ನಿಗದಿ ಮಾಡಿದ್ದಾರೆ.
ಇಷ್ಟು ದಿನ ಪ್ರಾಣಿ ಸಂಗ್ರಹಾಲಯದಲ್ಲಿ ಕೇವಲ ಜಿಂಕೆ, ಏಮು, ಕಾಡು ಕುರಿ, ಮೊಸಳೆ, ನವಿಲು, ಗಿಳಿ ಸೇರಿ ಕೆಲ ಪಕ್ಷಿಗಳು ಇದ್ದವು. ಆದರೆ ಪ್ರಾಣಿ ಸಂಗ್ರಹಾಲಯಕ್ಕೆ ಮತ್ತಷ್ಟು ಪ್ರಾಣಿ ತರಲು ಶಾಸಕ ಸತೀಶ್ ಜಾರಕಿಹೊಳಿ ಪ್ರಯತ್ನ ಆರಂಭಿಸಿದ್ದರು. ಈ ಹಿಂದಿನ ಮೈತ್ರಿ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದ ಸತೀಶ ಜಾರಕಿಹೊಳಿ ಆದೇಶವನ್ನು ಮಾಡಿದ್ದರು. ಜತೆಗೆ ಹೆಚ್ಚಿನ ಅನುದಾನ ಸಂಗ್ರಹಲಾಯಕ್ಕೆ ನೀಡಿ ಇದನ್ನು ಜನರ ಆಕರ್ಷಣೆಯ ಸ್ಥಳ ಮಾಡಲು ಪ್ರಯತ್ನ ಮಾಡಿದ್ದರು.
ಈ ಸಂಗ್ರಹಾಲಯ ಸತೀಶ ಜಾರಕಿಹೊಳಿ ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರ ವ್ಯಾಪ್ತಿಯಲ್ಲಿ ಇರೋದ್ರಿಂದ ಹೆಚ್ಚಿನ ಆಸಕ್ತಿಯನ್ನು ವಹಿಸಿದ್ದರು. ಇದೀಗ ಮೊದಲ ಹಂತವಾಗಿ ಮೂರು ಸಿಂಹಗಳು ಬಂದಿವೆ. ಜತೆಗೆ ಸಂಗ್ರಹಾಲಯದ ಅಭಿವೃದ್ಧಿಗೆ ಹೆಚ್ಚಿನ ಹಣ ಸಹ ಮಂಜೂರು ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಿರುವ ಸಂಗ್ರಹಾಲಯ ಬೆಳಗಾವಿ ಜನರನ್ನು ಆಕರ್ಷಿಸಬೇಕು ಎನ್ನುವುದು ಎಲ್ಲರ ಉದ್ದೇಶವಾಗಿದೆ. ಇದರಿಂದ ಬೆಳಗಾವಿ ಪ್ರವಾಸೋದ್ಯಮಕ್ಕೂ ಸಹಕಾರಿಯಾಗಲಿದೆ.