ಬೆಂಗಳೂರು,ಜ.19- ಆಡಳಿತಾರೂಢ ಬಿಜೆಪಿಯಲ್ಲಿ ಎಲ್ಲ ಬಿಕ್ಕಟ್ಟು ನಿವಾರಣೆಯಾಗಿದೆ ಎನ್ನುವಷ್ಟರಲ್ಲೇ ಸಂಪುಟದಲ್ಲಿ ಸ್ಥಾನಮಾನ ಸಿಗದ ಅಸಮಾಧಾನಿತ ಶಾಸಕರು ದೆಹಲಿ ತೆರಳಿರುವುದು ಕಮಲ ಪಾಳೆಯದಲ್ಲಿ ಸಂಚಲನ ಸೃಷ್ಟಿಸಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪರಮಾಪ್ತ ಹಾಗೂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮತ್ತು ಶಾಸಕ ಅರವಿಂದ್ ಬೆಲ್ಲದ್ ದಿಢೀರನೆ ರಾಷ್ಟ್ರೀಯ ನಾಯಕರ ಭೇಟಿಗೆ ತೆರಳಿರುವುದು ಕಮಲ ಪಾಳೆಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾಬೀತು ಮಾಡಿದೆ.
ರಾಷ್ಟ್ರೀಯ ನಾಯಕರ ಸೂಚನೆ ಮೇರೆಗೆ ಇಂದು ಮುಂಜಾನೆ ದಿಢೀರನೆ ರೇಣುಕಾಚಾರ್ಯ ಮತ್ತು ಅರವಿಂದ್ ಬೆಲ್ಲದ್ ಪ್ರಕ್ಷದ ಪ್ರಮುಖರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ವಿಶೇಷವೆಂದರೆ ಕಳೆದ ಬಾರಿ ದೆಹಲಿಗೆ ರೇಣುಕಾಚಾರ್ಯ ಒಬ್ಬರೇ ತೆರಳಿದ್ದರು. ಈ ಬಾರಿ ಅವರ ಜೊತೆ ಅರವಿಂದ್ ಬೆಲ್ಲದ್ ಅವರು ಕೂಡ ತೆರಳಿರುವುದು ಹಲವು ಸಂಶಯಗಳನ್ನು ಹುಟ್ಟುಹಾಕಿದೆ.
ಯಾವ ನಾಯಕರನ್ನು ಭೇಟಿಯಾಗಲಿದ್ದೇವೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಲು ನಿರಾಕರಿಸಿದ ರೇಣುಕಾಚಾರ್ಯ, ನಾವು ಯಾವುದೇ ವ್ಯಕ್ತಿಯ ವಿರುದ್ಧವಾಗಲಿ ಅಥವಾ ಪಕ್ಷದ ವಿರುದ್ಧವಾಗಿ ದೂರು ಕೊಡಲು ಬಂದಿಲ್ಲ. ನಮಗೆ ಅಸಮಾಧಾನವಾಗಿದೆ. ನಮ್ಮ ನಾಯಕರ ಮುಂದೆ ನೋವು ತೋಡಿಕೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ. ಪಕ್ಷದ ವರಿಷ್ಠರು ಸೂಚನೆ ಕೊಟ್ಟಂತೆ ದೆಹಲಿಗೆ ಬಂದಿದ್ದೇವೆ. ವರಿಷ್ಠರಿಗೆ ಏನು ಮಾಹಿತಿ ಕೊಡಬೇಕಿತ್ತೋ ಅದನ್ನು ತಿಳಿಸಿದ್ದೇವೆ. ನಾವು ಯಾರೊಬ್ಬರ ವಿರುದ್ಧ ದೂರು ಕೊಡುವ ಅಗತ್ಯವೂ ಇಲ್ಲ. ಪಕ್ಷದಲ್ಲಿ ಉಂಟಾಗಿರುವ ಅಸಮಾಧಾನವನ್ನು ಸರಿಪಡಿಸಬೇಕೆಂದು ಮನವಿ ಮಾಡಿದ್ದೇವೆ ಎಂದು ಹೇಳಿದರು.
ಪಕ್ಷದ ಪ್ರಮುಖರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಯಾವ ಯಾವ ಭಾಗಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಮಾಹಿತಿಯನ್ನೂ ನೀಡಿದ್ದೇವೆ. ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು. ಚುನಾವಣೆಯಲ್ಲಿ ಸೋತವರಿಗೆ ಸಂಪುಟದಲ್ಲಿ ಸ್ಥಾನ ನೀಡಿದ್ದಕ್ಕೆ ಅಸಮಾಧಾನ ಉಂಟಾಗಿರುವುದು ನಿಜ. ಐದಾರು ಬಾರಿ ಗೆದ್ದವರು, ಪಕ್ಷಕ್ಕೆ ದುಡಿದವರಿಗೆ ಕೊಡಬೇಕಿತ್ತು. ಕರಾವಳಿ ಭಾಗ, ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕಕ್ಕೂ ಅನ್ಯಾಯವಾಗಿದೆ. ಇದನ್ನು ಸರಿಪಡಿಸಬೇಕೆಂದು ಮನವಿ ಮಾಡಲಾಗಿದೆ ಎಂದು ಹೇಳಿದರು.