ಹುಬ್ಬಳ್ಳಿ: ಗ್ರಾಮೀಣ ಭಾಗದಲ್ಲಿ ನಡೆಯುತ್ತಿದ್ದ ಅಕ್ರಮ ರಿಫಿಲಿಂಗ್ ನಗರಕ್ಕೂ ವ್ಯಾಪಿಸಿದ್ದು, ಇದೀಗ ಖಚಿತ ಮಾಹಿತಿ ಮೇರೆಗೆ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಗ್ಯಾಸ್ ಸಿಲಿಂಡರ್ ಅಡ್ಡೆಯ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದ ಖಾಲಿ ಗ್ಯಾಸ್ ಸಿಲಿಂಡರ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರವಾರ ರಸ್ತೆಯ ಕೆಂಪಗೇರಿ ಹತ್ತಿರದ ಗೋಡೌನ್ನಲ್ಲಿ ಅಕ್ರಮವಾಗಿ ಕರ್ಮಷಿಯಲ್ ಖಾಲಿ ಸಿಲಿಂಡರ್ ಸಂಗ್ರಹ ಮಾಡಿದ್ದ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ಜಂಟಿಯಾಗಿ ದಾಳಿ ಮಾಡಿ, 4.09 ಲಕ್ಷ ರೂ ಮೌಲ್ಯದ ವಾಣಿಜ್ಯ ಬಳಕೆಯ 409 ಖಾಲಿ ಗ್ಯಾಸ್ ಸಿಲಿಂಡರ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದಾಳಿ ವೇಳೆ ಆನಂದ ನಗರದ ನಿವಾಸಿ ರಾಜೇಸಾಬ ಕಟ್ಟಿಮನಿ (59) ಎಂಬಾತನನ್ನು ಬಂಧಿಸಲಾಗಿದ್ದು, ಮತ್ತೋರ್ವ ಹಾವೇರಿ ಮೂಲದ ಕಿರಣ ಮಾಗಾವಿ ಪರಾರಿಯಾಗಿದ್ದಾನೆ.ಈ ಕುರಿತು ಹು-ಧಾ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಪ್ರತಿಕ್ರಿಯಿಸಿ, “ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಆಹಾರ ನಿರೀಕ್ಷಕ ಶಿವಪ್ಪ ಹೊನ್ನಳ್ಳಿ ಎಂಬವರು ಕಾರವಾರ ರಸ್ತೆಯಲ್ಲಿ ಕೆಂಪಗೇರಿ ಬಳಿ ಯಾವುದೇ ಪರವಾನಗಿ ಇಲ್ಲದ 409 ಖಾಲಿ ಗ್ಯಾಸ್ ಸಿಲಿಂಡರ್ಗಳನ್ನು ಸಂಗ್ರಹ ಮಾಡಿದ್ದಾಗಿ ದೂರು ನೀಡಿದ್ದರು. ಪ್ರಕರಣ ದಾಖಲಾಗಿದ್ದು, ಯಾವ ಕಾರಣಕ್ಕಾಗಿ ಇಲ್ಲಿ ಸಂಗ್ರಹ ಮಾಡಿದ್ದರು. ಯಾವ ಚಟುವಟಿಕೆ ನಡೆಯುತ್ತಿತ್ತು ಎಂಬ ಬಗ್ಗೆ ತನಿಖೆಯಲ್ಲಿ ಪತ್ತೆ ಹಚ್ಚಲಾಗುವುದು. ರಾಜೇಸಾಬ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ” ಎಂದು ಮಾಹಿತಿ ನೀಡಿದರು.
Laxmi News 24×7