ಬೆಂಗಳೂರು (ಜ. 10): ಗೋಹತ್ಯೆ ನಿಷೇಧ ಮಾಡಬೇಕಾದರೆ ಇಡೀ ದೇಶದಲ್ಲಿ ಬ್ಯಾನ್ ಮಾಡಿ. ದೇಶದಲ್ಲಿ ಗೋ ಮಾಂಸ ರಫ್ತು, ಆಮದು ಮಾಡೋದನ್ನು ಮೊದಲು ನಿಲ್ಲಿಸಿ. ಬಿಜೆಪಿಯವರು ಸಗಣಿ ಎತ್ತಿಲ್ಲ, ಗಂಜಲ ಬಾಚಿಲ್ಲ. ಆದರೆ ಗೋಮಾತೆ ಪೂಜೆ ಮಾಡುತ್ತೇವೆ ಎನ್ನುತ್ತಾರೆ. ಬಿಜೆಪಿ ಬೆಂಬಲಿಗರೇ ದನದ ಮಾಂಸ ರಫ್ತು ಮಾಡುತ್ತಾರೆ. ಬಿಜೆಪಿಯದ್ದು ದರಿದ್ರ ಸರ್ಕಾರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಅಲ್ಲದೆ ಬಿಜೆಪಿ ಸರ್ಕಾರದ ಜನ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ರಸ್ತೆಗಿಳಿದು ಪ್ರತಿಭಟನೆ ನಡೆಸುವುದಾಗಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಸರ್ಕಾರದ ಜನ ವಿರೋಧ ಕಾಯಿದೆಗಳನ್ನು ಇಟ್ಟುಕೊಂಡು ಶೀಘ್ರದಲ್ಲೇ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಈ ವರ್ಷ ಸಂಘರ್ಷದ ವರ್ಷ. ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಜ. 18ರವರೆಗೂ ಪಕ್ಷದ ಕಾರ್ಯಕ್ರಮ ಇದೆ. ನಂತರ ಪಕ್ಷದಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಇದಕ್ಕಾಗಿ ಜೈಲಿಗೆ ಹೋಗೋಕೂ ಸಿದ್ಧ. ಮೊದಲು ಹೋರಾಟ ಮಾಡುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯನವರ ನಿವಾಸದಲ್ಲಿ ಇಂದು ಬಿಜೆಪಿ ಸರ್ಕಾರದ ಐದು ಜನ ವಿರೋಧಿ ಕಾಯ್ದೆಗಳ ಬಗ್ಗೆ ಕಿರು ಪುಸ್ತಕ ಬಿಡುಗಡೆ ಮಾಡಲಾಯಿತು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ಸರ್ಕಾರ ಐದು ಕಾಯ್ದೆಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಸುಳ್ಳು ಯಾವುದು ಸತ್ಯ ಯಾವುದು ಎಂಬ ಅಂಶಗಳನ್ನು ಸೇರಿಸಿ ನಾವು ಒಂದು ಕಿರು ಪುಸ್ತಕವನ್ನು ಹೊರ ತಂದಿದ್ದೇವೆ. ಎಪಿಎಂಸಿ ಕಾಯ್ದೆ ತಿದ್ದುಪಡಿ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಜಾನುವಾರು ಹತ್ಯೆ ನಿಷೇಧ ಕಾಯ್ದೆ 2020, ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ, ರೈತರೊಂದಿಗೆ ಕೃಷಿ ಬೆಲೆ ಖಾತ್ರಿ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ 2020 ಕಾಯ್ದೆಗಳ ಸರಿ -ತಪ್ಪುಗಳ ಅಂಶಗಳನ್ನು ಲಗತ್ತಿಸಿರುವ ಕಿರು ಹೊತ್ತಿಗೆ ಹೊರ ತರಲಾಗಿದೆ ಎಂದರು.
ಎಪಿಎಂಸಿ ಕ್ರಮೇಣ ಸತ್ತು ಹೋಗುತ್ತದೆ. ಎಪಿಎಂಸಿಯನ್ನು ಪೂರ್ತಿಯಾಗಿ ಮುಗಿಸಿಬಿಡುವುದು ಬಿಜೆಪಿ ಉದ್ದೇಶ. ಭೂ ಸುಧಾರಣಾ ಕಾಯ್ದೆಯಲ್ಲಿ ಯಾರು ಬೇಕಾದರೂ ವ್ಯವಸಾಯ ಮಾಡಬಹುದು ಮತ್ತು ಭೂಮಿ ತೆಗೆದುಕೊಳ್ಳಬಹುದು ಎಂದು ಹೇಳುತ್ತಾರೆ. ದೇವರಾಜ ಅರಸು ಅವರು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಉಳುವವನೆ ಭೂಮಿ ಒಡೆಯ ಎಂದು ಮಾಡಿದರು. ಅದರಿಂದ ಸಾವಿರಾರು ಜನ ಭೂ ಮಾಲೀಕರಾದರು. ಈಗ ಇದಕ್ಕೆ ತಿದ್ದುಪಡಿ ಮಾಡಿದ್ದಾರೆ. ಈಗ ಯಾರು ಬೇಕಾದರೂ ಭೂಮಿ ತೆಗೆದುಕೊಳ್ಳಬಹುದು ಎಂದು ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಹೊಸ ಕಾಯ್ದೆಯಿಂದ ಅದಾನಿಯಂಥವರು ಬೇಕಾದರೂ ಕೃಷಿ ಭೂಮಿಯನ್ನು ತೆಗೆದುಕೊಳ್ಳಬಹುದು. ಇದು ಪ್ರವಾಹದ ಗೇಟನ್ನು ಓಪನ್ ಮಾಡಿದ ಹಾಗೆ. ಇದರಿಂದ ಸಣ್ಣ ರೈತರು ಜಮೀನು ಮಾರಾಟ ಮಾಡಿ ನಂತರ ದೊಡ್ಡ ಕಂಪನಿಯ ಅಧೀನದಲ್ಲಿ ಕೆಲಸ ಮಾಡುವುದಕ್ಕೆ ಹೋಗುತ್ತಾರೆ. ಈಗ ಉಳ್ಳವನೇ ಭೂಮಿ ಒಡೆಯ ಎಂಬಂತಾಗಿದೆ. ಇದು ಬಹಳ ಅಪಾಯಕಾರಿ. ಕೃಷಿ ಭೂಮಿ ರಿಯಲ್ ಎಸ್ಟೇಟ್, ಮೋಜು ಮಸ್ತಿಗೆ ಉಪಯೋಗವಾಗುತ್ತದೆ. ನಾನು ಕೃಷಿಕನಲ್ಲದವರಿಗೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಆದರೆ, ಸಿದ್ದರಾಮಯ್ಯ ಅವರೇ 79- ಎ ಮತ್ತು ಬಿಗೆ ತಿದ್ದುಪಡಿ ತರಲು ಹೊರಟಿದ್ದರು ಎಂದು ಬಿಜೆಪಿ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ. ಜನರಿಗೆ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ನಾನು ಮಾಡಿದ್ದು ಕೃಷಿಯೇತರ ಆದಾಯ 25 ಲಕ್ಷ ಅಂತ. ಆದರೆ, ಬಿಜೆಪಿವರು ಸುಳ್ಳು ಹೇಳುತ್ತಿದ್ದಾರೆ. ಇದೆಲ್ಲವನ್ನೂ ಈ ಕಿರುಹೊತ್ತಿಗೆಯಲ್ಲಿ ಹೇಳಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.