ಬೀದರ್: ಜಿಲ್ಲಾ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ವೇಳೆ ಶಾಸಕ ಸಿದ್ದು ಪಾಟೀಲ್ ಮತ್ತು ಎಂಎಲ್ಸಿ ಭೀಮರಾವ್ ಪಾಟೀಲ್ ಪರಸ್ಪರ ಕೈಕೈ ಮಿಲಾಯಿಸಿದ ಘಟನೆ ನಡೆಯಿತು. ಈ ಇಬ್ಬರೂ ಜನಪ್ರತಿನಿಧಿಗಳನ್ನು ಸಮಾಧಾನ ಮಾಡಲು ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸೇರಿದಂತೆ ಉಪಸ್ಥಿತರಿದ್ದ ಗಣ್ಯರು ಹರಸಾಹಸಪಟ್ಟರು.
ಬೀದರ್ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ನೇತೃತ್ವದಲ್ಲಿ ಕೆಡಿಪಿ ಸಭೆ ನಡೆಯುತ್ತಿತ್ತು. ಈ ವೇಳೆ, ಸಭೆಯ ಆರಂಭದಲ್ಲೇ ಲೇಔಟ್ ವಿಚಾರವಾಗಿ ಹುಮನಾಬಾದ್ ಬಿಜೆಪಿ ಶಾಸಕ ಸಿದ್ದು ಪಾಟೀಲ್ ಹಾಗೂ ಪರಿಷತ್ ಬಿಜೆಪಿ ಸದಸ್ಯ ಭೀಮರಾವ್ ಪಾಟೀಲ್ ಮಧ್ಯೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ಜೊತೆಗೆ ಪರಸ್ಪರರು ಅವಾಚ್ಯ ಪದ ಬಳಸಿ ನಿಂದಿಸಿದರು. ಎಮ್ಎಲ್ಸಿ ಚಂದ್ರಶೇಖರ್ ಪಾಟೀಲ್ ಕೂಡ ಮಧ್ಯಪ್ರವೇಶಿಸಿ ಭೀಮರಾವ್ ಪಾಟೀಲ್ ಅವರ ಬೆಂಬಲಕ್ಕೆ ನಿಂತರು.
ಇದರಿಂದ ಸಭೆಯಲ್ಲಿ ಗೊಂದಲ ಉಂಟಾಗಿ, ಕೆಲಕಾಲ ಸಭೆಯನ್ನು ಸಚಿವ ಖಂಡ್ರೆ ಅವರು ಮುಂದೂಡಿದರು. ಬಳಿಕ ಸಿದ್ದು ಪಾಟೀಲ್ ಮತ್ತು ಭೀಮರಾವ್ ಪಾಟೀಲ್ ಅವರನ್ನು ಸಮಾಧಾನ ಮಾಡಿ ಹೊರಗಡೆ ಕರೆದೊಯ್ಯಲಾಯಿತು.
ಸಭೆಯಲ್ಲಿ ಸಚಿವ ರಹೀಂ ಖಾನ್, ಡಿಸಿ ಶಿಲ್ಪಾ ಶರ್ಮಾ, ಸಿಇಓ ಗಿರೀಶ್ ಬೋಧಲೆ, ಎಸ್ಪಿ ಪ್ರದೀಪ್ ಗುಂಟೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.
Laxmi News 24×7