ಬೆಂಗಳೂರು: ಕೆಲವರು ತಮ್ಮ ಸ್ವಾರ್ಥಕ್ಕೋಸ್ಕರ ವೀರಶೈವ ಹಾಗು ಲಿಂಗಾಯತರನ್ನು ಬೇರೆ ಬೇರೆ ಮಾಡ್ತಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ.
ಬೆಂಗಳೂರಲ್ಲಿಂದು ಮಾತನಾಡಿದ ಅವರು, ವೀರಶೈವರು, ಲಿಂಗಾಯತರನ್ನು ಬೇರೆ ಬೇರೆ ಮಾಡಲು ಸಾಧ್ಯವಿಲ್ಲ. ಯಾವ ಶಕ್ತಿಯಿಂದಲೂ ಬೇರೆ ಬೇರೆ ಮಾಡಲು ಸಾಧ್ಯವಿಲ್ಲ. ಪೂಜ್ಯ ಮಾತೆ ಮಹಾದೇವಿ ಅವರು ಲಿಂಗಾಯತ ಪ್ರತ್ಯೇಕ ಧರ್ಮ ಅಂತ ಹೋರಾಟ ಮಾಡಿದರೆ ಮಾನ್ಯತೆ ಸಿಗಬಹುದು ಅಂತ ಹೊರಟಿದ್ದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಿರ್ಣಯದ ಒಗ್ಗಟ್ಟಿನಲ್ಲಿ ಶಕ್ತಿ ಇದೆ. ವೀರಶೈವ ಸಮುದಾಯ ಲಿಂಗಾಯತ ಸಮುದಾಯದ ಕೊಡುಗೆ ಕರ್ನಾಟಕಕ್ಕೆ ಅಪಾರ. ನಾವು ಒಗ್ಗಟ್ಟಾಗಿದ್ದರೆ ಮಾತ್ರ ಅಸ್ತಿತ್ವ ಇಟ್ಟುಕೊಳ್ಳಬಹುದು. ನಾವೆಲ್ಲರೂ ಒಂದೇ ಎನ್ನುವುದು ನನ್ನ ನಿಲುವು. ಕೆಲವರು ಸ್ವಾರ್ಥಕ್ಕಾಗಿ ಅಲ್ಲಿ ಇಲ್ಲಿ ಬೇರೆ ಬೇರೆ ಕೂಗು ಎಬ್ಬಿಸಿದ್ದಾರೆ ಎಂದು ದೂರಿದರು.
ಹಿಂದೆ ನಮ್ಮ ಭವನ ನಿರ್ಮಾಣ ಸಂದರ್ಭದಲ್ಲಿ ಕೂಡ ವೀರಶೈವ ಬೇರೆ ಲಿಂಗಾಯತ ಬೇರೆ ಎಂದು ಗದ್ದಲ ಎಬ್ಬಿಸಿದ್ದರು. ಆಗ ಶಿವಕುಮಾರ್ ಸ್ವಾಮೀಜಿಗಳೇ ಎರಡೂ ಒಂದೇ ಭಿನ್ನ ಇಲ್ಲ ಎಂದು ತೀರ್ಮಾನ ಕೊಟ್ಟಿದ್ದಾರೆ. ಹಿಂದಿನಿಂದಲೂ ಮಹಾಸಭಾ ಕೂಡ ವೀರಶೈವ, ಲಿಂಗಾಯತ ಬೇರೆ ಅಲ್ಲ ಎಂದೇ ಪ್ರತಿಪಾದಿಸಿದೆ. ಇದಕ್ಕೆ ನಾವು ಈಗಲೂ ಬದ್ದರಾಗಿದ್ದೇವೆ ಮುಂದೆಯೂ ಬದ್ದರಾಗಿದ್ದೇವೆ. ಸಾಮಾನ್ಯ ಜನರಲ್ಲಿ ಇದರ ಬಗ್ಗೆ ಭಿನ್ನಾಭಿಪ್ರಾಯ ಇಲ್ಲ. ವೀರಶೈವ ಲಿಂಗಾಯತ ಇಬ್ಬರಲ್ಲೂ ವೈವಾಹಿಕ ಸಂಬಂಧ ಇದೆ. ಯಾರು ಏನೇ ಹೇಳಿದರೂ ಯಾವುದೇ ಶಕ್ತಿ ವೀರಶೈವರನ್ನು ಲಿಂಗಾಯತರನ್ನು ಬೇರೆ ಬೇರೆ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಒಡಕು ಎಂದರೆ ಕೆಡುಕು. ಮೊನ್ನೆ ಬಸವ ಸಂಸ್ಕೃತಿ ಅಭಿಯಾನ ನಡೆದಿದೆ. ಅಖಿಲ ಭಾರತ ವೀರಶೈವ ಮಹಾಸಭಾ ಕೂಡ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ಎಂದು ಒತ್ತಡ ಹಾಕಿತ್ತು. ಬಸವ ಸಂಸ್ಕೃತಿ ಅಭಿಯಾನ ಸ್ವಾಗತ ಮಾಡಿ ಬೀದರ್ನಲ್ಲಿ ನಡೆದಾಗ ನಾನೇ ಉದ್ಘಾಟನೆ ಮಾಡಿದ್ದೇನೆ. ಆದರೆ ಕೆಲವರು ಸಂಕುಚಿತ ಮನೋಭಾವ ಇರುವವರು ಇವತ್ತು ಬೇರೆ ಹೇಳಿಕೆ ನೀಡ್ತಿದ್ದಾರೆ. ದ್ವಂದ್ವ ನಿಲುವು ಇರುವವರನ್ನು ನಾವು ಸಮಾವೇಶಕ್ಕೆ ಕರೆದಿಲ್ಲ ಎಂದು ಈಗ ಹೇಳ್ತಿದ್ದಾರೆ. ಬಸವಣ್ಣ ನಿಮ್ಮ ಖಾಸಗಿ ಆಸ್ತಿನಾ? ಬಸವಣ್ಣ ನಿಮಗೆ ಸೀಮಿತವಾಗಿರುವವರಾ?. ಬಸವಣ್ಣನವರನ್ನು ಸೀಮಿತ ಮಾಡುವುದು ಅಕ್ಷಮ್ಯ ಎಂದರು.
ಬಸವ ತತ್ವ ಸಿದ್ದಾಂತ ಯಾವತ್ತಿಗೂ ಪ್ರಸ್ತುತ. ಇದರಲ್ಲಿ ಬಸವಣ್ಣನ ಹೆಸರು ತೆಗೆದುಕೊಂಡು ಸ್ವಾರ್ಥ ಮಾಡಬೇಡಿ. ನೀವು ನಮ್ಮವರಿಗೇ ನಮ್ಮವರೂ ಅಂತ ಹೇಳುವುದಿಲ್ಲ ಎಂದರೆ ಉಳಿದವರಿಗೆ ನಮ್ಮವರು ಅಂತ ಹೇಗೆ ಹೇಳ್ತೀರಿ. ಭಕ್ತರಿಗೆ ಉತ್ತರ ಹೇಳಬೇಕಲ್ಲ ಸ್ವಾಮೀಜಿಗಳು. ನಾನು ಯಾವ ಮಠಾಧೀಶರನ್ನೂ ಟೀಕೆ ಮಾಡುವುದಿಲ್ಲ. ಎಲ್ಲ ಪೂಜ್ಯರ ಬಗ್ಗೆ ಅಪಾರ ಗೌರವ ಇದೆ, ಆದರೆ ಭಕ್ತರ ಮನಸ್ಸಿನಲ್ಲಿ ಇರುವ ಪ್ರಶ್ನೆ ಗಮನಕ್ಕೆ ತರುತ್ತಿದ್ದೇನೆ. ಮಹಾಸಭೆ ನಿರ್ಣಯ ವೈಯಕ್ತಿಕ ನಿರ್ಣಯ ಒಂದೇ. ವೀರಶೈವ ಲಿಂಗಾಯತ ಇಬ್ಬರನ್ನೂ ಪ್ರತ್ಯೇಕ ಮಾಡಲು ಆಗುವುದಿಲ್ಲ. ಹಾಗೇನಾದರೂ ಬೇರೆ ಬೇರೆ ಮಾಡಿದರೆ ಪ್ರತಿ ಪಕ್ಷಗಳು ಲಾಭ ಮಾಡಿಕೊಳ್ಳುತ್ತವೆ. ಇದನ್ನು ದಾರಿ ತಪ್ಪಿಸಲು ಪ್ರಯತ್ನ ಮಾಡ್ತಾರೆ, ಅಪಪ್ರಚಾರ ಮಾಡ್ತಾರೆ. ಇದರಿಂದ ನಾವು ಜಾಗೃತವಾಗಬೇಕು ಎಂದು ತಿಳಿಸಿದರು.
Laxmi News 24×7