ಬಂಟ್ವಾಳ: ಕಸ ಸಂಗ್ರಹಣಾ ವಾಹನವನ್ನು ತಾವೇ ಚಲಾಯಿಸುವ ಮೂಲಕ ಗಮನ ಸೆಳೆದು, ಕಳೆದ ವರ್ಷ ದೆಹಲಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪೆರುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೆಫೀಸಾ ಈಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಗ್ರಾಪಂ ಅಧ್ಯಕ್ಷೆ ಮತ್ತು ಬಿಲ್ ಕಲೆಕ್ಟರ್ ವಿಲಿಯಂ ಅವರನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಲಾಗುತ್ತಿದೆ.
ಏನಿದು ಪ್ರಕರಣ?: ಲೋಕಾಯುಕ್ತಕ್ಕೆ ವ್ಯಕ್ತಿಯೊಬ್ಬರು ನೀಡಿದ ದೂರಿನಂತೆ ಶನಿವಾರ ಈ ಟ್ರ್ಯಾಪ್ ನಡೆದಿದೆ. ಎಸ್ಪಿ ಕುಮಾರ್ ಚಂದ್ರ ನೀಡಿರುವ ಪತ್ರಿಕಾ ಪ್ರಕಟಣೆಯ ವಿವರ ಹೀಗಿದೆ.
ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದಲ್ಲಿ ದೂರುದಾರನಿಗೆ ಸಂಬಂಧಿಸಿದ 1 ಎಕರೆ ಕೃಷಿ ಜಮೀನು ಇದ್ದು, ನೀರಿನ ವ್ಯವಸ್ಥೆ ಇಲ್ಲದೇ ಇರುವುದರಿಂದ ಗ್ರಾಮ ಪಂಚಾಯತ್ಗೆ ಸರ್ಕಾರದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ತಮ್ಮ ಜಾಗಕ್ಕೂ ಒಂದು ಕೊಳವೆ ಬಾವಿಯನ್ನು ಮಾಡಿಕೊಡಲು 2024 ರಲ್ಲಿ ಅರ್ಜಿ ಸಲ್ಲಿಸಿದ್ದಾರೆ.
2024 ನೇ ಸಾಲಿನಲ್ಲಿ ಪೆರುವಾಯಿ ಗ್ರಾಮ ಪಂಚಾಯತ್ ಸತಾಯಿಸಿ ಕೊನೆಯಲ್ಲಿ ದೂರು ನೀಡಿದವರ ಸಂಬಂಧಿಕರ ಹೆಸರನ್ನು ಕೊಳವೆ ಬಾವಿ ಯೋಜನೆಯ ಪಟ್ಟಿಯಲ್ಲಿ ಸೇರಿಸಿರುವುದಿಲ್ಲ. ನಂತರ 2025ನೇ ಇಸವಿಯಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಸರ್ಕಾರವು ಕೃಷಿಕರಿಗೆ ಕೊಳವೆ ಬಾವಿ ಮಾಡಿಕೊಡುತ್ತಿರುವ ಕುರಿತು ತಿಳಿದು ಬಂದಾಗ, ದೂರು ನೀಡಿದವರ ಸಂಬಂಧಿಕರು ಪುನಃ ಮೇ 2025 ರಲ್ಲಿ ಕೊಳವೆ ಬಾವಿಗೆ ಅರ್ಜಿಯನ್ನು ಸಲ್ಲಿಸುತ್ತಾರೆ.
ನಂತರ ದೂರುದಾರರ ಪತ್ನಿ ಪೆರುವಾಯಿ ಗ್ರಾಮ ಪಂಚಾಯತ್ ಕಚೇರಿಗೆ ಹಲವು ಬಾರಿ ತೆರಳಿ ವಿಚಾರಿಸಿದ್ದರೂ ಕೂಡ ಯಾವುದೇ ಪ್ರತಿಕ್ರಿಯೆ ನೀಡಿರುವುದಿಲ್ಲ. ದೂರುದಾರರ ಸಂಬಂಧಿ ಸುಮಾರು 75 ವರ್ಷ ವಯಸ್ಸಾಗಿದ್ದು, ಅವರಿಗೆ ಅಸೌಖ್ಯ ಇದ್ದುದರಿಂದ ದೂರುದಾರರನ್ನು ಕರೆದು ಕೊಳವೆ ಬಾವಿ ಬಗ್ಗೆ ಪಂಚಾಯತ್ಗೆ ಹೋಗಿ ವಿಚಾರಿಸಿಕೊಂಡು ಬರುವಂತೆ ತಿಳಿಸಿದ್ದು, ಸೆ.2ರಂದು ಗ್ರಾಮ ಪಂಚಾಯತ್ಗೆ ಹೋಗಿ ಗ್ರಾಮ ಪಂಚಾಯತ್ನ ಅಧ್ಯಕ್ಷರಾದ ನೆಫಿಸ್ಸಾ ಅವರಲ್ಲಿ ತನ್ನ ಸಂಬಂಧಿಯ ಹೆಸರಿಗೆ ಕೊಳವೆ ಬಾವಿ ಮಂಜೂರು ಆಗಿದೆಯೇ ಎಂಬ ಬಗ್ಗೆ ಕೇಳಿದ್ದಾರೆ.
ನಿಮಗೆ ಬೋರ್ವೆಲ್ ಫ್ರೀ ಆಗುತ್ತದೆ. ಬೆಂಗಳೂರು ಆಫೀಸ್ಗೆ ಹತ್ತು ಸಾವಿರ ಕೊಡಬೇಕು. ಹಣ ಕೊಟ್ಟರೆ ಅವರು ಪಾಸ್ ಮಾಡುತ್ತಾರೆ. ತಾನು ಬೆಂಗಳೂರಿಗೆ ಹೋಗಿ ನಿಮ್ಮ ಕೆಲಸ ಮಾಡಿಸುತ್ತೇನೆ. ಹಣ ತೆಗೆದುಕೊಂಡು ಬನ್ನಿ ಎಂದು ಗ್ರಾಪಂನವರು ಹೇಳಿದ್ದಾರೆ. ನಂತರ ಸೆ.4ರಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ನೆಫಿಸಾ ಅವರಲ್ಲಿ ಬೋರ್ವೆಲ್ ಹಾಕಿಸಿ ಕೊಡಲು ಕೇಳಿಕೊಂಡಾಗ ಅವರೂ 10 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದೆ.
Laxmi News 24×7