ಮೈಸೂರು: ಮೈಸೂರಿನ ಅವಧೂತ ದತ್ತಪೀಠದ ವತಿಯಿಂದ ಭಾರತೀಯ ಸೇನೆಗೆ 25 ಲಕ್ಷ ರೂ.ಗಳ ಕಾಣಿಕೆಯನ್ನು ಅರ್ಪಿಸಲಾಯಿತು. ಶ್ರೀ ದತ್ತ ವೆಂಕಟೇಶ್ವರ ಕ್ಷೇತ್ರದ 26ನೇ ಬ್ರಹ್ಮೋತ್ಸವ ಭಾನುವಾರ ಸಂಜೆ ವೇದ ಪಾರಾಯಣಗಳ ಮೂಲಕ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮತ್ತು ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರ ಸಮ್ಮುಖದಲ್ಲಿ ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮೈಸೂರು ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಮೂಲಕ ಅವಧೂತ ದತ್ತ ಪೀಠದಿಂದ ಕೊಡಮಾಡುವ 25 ಲಕ್ಷ ರೂ.,ಗಳ ಚೆಕ್ ಹಸ್ತಾಂತರಿಸಲಾಯಿತು.
ಕಾಣಿಕೆಯನ್ನು ಸ್ವೀಕರಿಸಿ ಮಾತನಾಡಿದ ಸಂಸದ ಯದುವೀರ್ ಅವರು, ಮೈಸೂರು ನಗರ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಸಂಸ್ಕೃತಿ ಮತ್ತು ಪರಂಪರೆ, ಗುರು ಪರಂಪರೆಯನ್ನು ಅವಧೂತ ದತ್ತಪೀಠ ಉಳಿಸಿಕೊಂಡು ಬಂದಿದೆ. ಅತ್ಯುತ್ತಮ ವಾತಾವರಣ, ಸಂಗೀತದ ನೀನಾದ ಇಲ್ಲಿ ನೆಲೆಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 83ನೇ ಜನ್ಮದಿನೋತ್ಸವವೂ ಕೂಡ ಇರುವುದರಿಂದ ಅವರಿಗೆ ಆರೋಗ್ಯ, ಐಶ್ವರ್ಯ, ಆಯಸ್ಸು ಸಂತೋಷ ಸಿಗಲಿ ಎಂದು ಶುಭಾಶಯ ತಿಳಿಸಿದರು. ಆಶ್ರಮದ ಈ ಕಾಣಿಕೆಯನ್ನು ನಾನು ನಮ್ಮ ಭಾರತ ಸರ್ಕಾರಕ್ಕೆ ತಲುಪಿಸುತ್ತೇನೆ. ಶ್ರೀಗಳ ಆಶೀರ್ವಾದವು ಇಡೀ ಭಾರತದ ಜನರ ಮೇಲೆ ಮತ್ತು ನಮ್ಮ ಸೈನಿಕರ ಮೇಲೆ ಇರಬೇಕೆಂದು ಪ್ರಾರ್ಥಿಸುತ್ತೇನೆ ಎಂದು ಆಶಿಸಿದರು.
ಈ ವೇಳೆ ನಿವೃತ್ತ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್, ಶಾಸಕರಾದ ಟಿ ಎಸ್ ಶ್ರೀವತ್ಸ, ಬಿಜೆಪಿ ನಗರ ಅಧ್ಯಕ್ಷ ಎಲ್. ನಾಗೇಂದ್ರ ಮತ್ತಿತರರು ಇದ್ದರು.
Laxmi News 24×7