ಬೆಂಗಳೂರು: ಮಹಿಳೆಯನ್ನ ವಿವಸ್ತ್ರಗೊಳಿಸಿ ಸಹಚರರಿಂದ ಆತ್ಯಾಚಾರ ಮಾಡಿಸಿದ್ದಾರೆ ಎಂಬ ಆರೋಪದಡಿ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸಂತ್ರಸ್ತೆಯು ನೀಡಿದ ದೂರು ಆಧರಿಸಿ ಶಾಸಕ ಮುನಿರತ್ನ, ಸಹಚರರಾದ ವಸಂತ, ಚನ್ನಕೇಶವ ಹಾಗೂ ಕಮಲ್ ಎಂಬುವರ ವಿರುದ್ಧ ಅತ್ಯಾಚಾರ ಆರೋಪದಡಿ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ನೀಡಿರುವ ದೂರಿನಲ್ಲಿ ಏನಿದೆ?: ”40 ವರ್ಷದ ಸಂತ್ರಸ್ತೆಯಾದ ತಾನು ಪೀಣ್ಯ 2ನೇ ಹಂತದ ನಿವಾಸಿಯಾಗಿದ್ದು, ಬಿಜೆಪಿ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿರುವೆ. ಮೊದಲ ಪತಿ ಬಿಟ್ಟು ಹೋಗಿದ್ದರಿಂದ ಐದು ವರ್ಷಗಳ ಹಿಂದೆ 2ನೇ ಮದುವೆ ಮಾಡಿಕೊಂಡು ಸಂಸಾರ ಮಾಡಿಕೊಂಡಿರುವೆ. ಈ ಮಧ್ಯೆ ವೇಶ್ಯಾವಾಟಿಕೆ ನಡೆಸುತ್ತಿರುವುದಾಗಿ ಪೀಣ್ಯ ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸುವಂತೆ ಮಾಡಿ ತನ್ನನ್ನು ಜೈಲಿಗೆ ಕಳುಹಿಸಲಾಗಿತ್ತು. ಅಲ್ಲದೇ ಕೊಲೆ ಯತ್ನ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿತ್ತು. ಜಾಮೀನು ಪಡೆದು ಹೊರಬಂದ ಬಳಿಕ 2023 ಜೂ.11ರಂದು ವಸಂತ್ ಹಾಗೂ ಆತನ ಸಹಚರರು ಆಗಮಿಸಿ ಶಾಸಕ ಮುನಿರತ್ನ ಅವರೊಂದಿಗೆ ಮಾತನಾಡಿದರೆ ನಿನ್ನ ಮೇಲಿನ ಪ್ರಕರಣ ಹಿಂಪಡೆಯುದಾಗಿ ಹೇಳಿ ಕಾರಿನಲ್ಲಿ ಜೆ.ಪಿ.ಪಾರ್ಕ್ ಬಳಿಯಿರುವ ಕಚೇರಿಗೆ ಕರೆದುಕೊಂಡು ಹೋಗಿದ್ದರು” ಎಂದು ದೂರಿನಲ್ಲಿ ಸಂತ್ರಸ್ತೆ ಮಹಿಳೆ ತಿಳಿಸಿದ್ದಾರೆ.
”ಕಚೇರಿಗೆ ಕರೆದೊಯ್ದ ಬಳಿಕ ತನ್ನನ್ನ ಬಲವಂತವಾಗಿ ಕಟ್ಟಿ ಹಾಕಿ ಶಾಸಕ ಹಾಗೂ ಆತನ ಸಹಚರರು ತನ್ನನ್ನ ವಿವಸ್ತ್ರಗೊಳಿಸಿದರು. ಬಳಿಕ ಮುನಿರತ್ನ ಸೂಚನೆಯಂತೆ ವಸಂತ್ ಹಾಗೂ ಕಮಲ್ ಮೂಲಕ ತಮ್ಮ ಮೇಲೆ ಆತ್ಯಾಚಾರ ಮಾಡಿಸಿದರು” ಎಂದು ದೂರಿನಲ್ಲಿ ಸಂತ್ರಸ್ತೆ ಆರೋಪಿಸಿದ್ದಾರೆ.
Laxmi News 24×7