ಬೆಳಗಾವಿ : ಇಡೀ ಪಂಚಮಸಾಲಿ ಸಮುದಾಯವನ್ನು ಯತ್ನಾಳ್ ಅವರಿಗೆ ಬರೆದುಕೊಟ್ಟಿಲ್ಲ. ಏ.13ರಂದು ಬೆಳಗಾವಿಯಲ್ಲಿ ಯತ್ನಾಳ್ ಪರವಾಗಿ ಹಮ್ಮಿಕೊಂಡಿರುವ ಪ್ರತಿಭಟನೆ ಅದು ವೈಯಕ್ತಿಕ ಎನ್ನುವ ಮೂಲಕ ಕೂಡಲಸಂಗಮ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ಮಾತಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಶೇ.80ರಷ್ಟು ಪಂಚಮಸಾಲಿಗರು ಬಿಜೆಪಿಯಲ್ಲಿದ್ದಾರೆ ಅಂತಾ ಹೇಳಿದ್ದು ನನ್ನ ಮನಸ್ಸಿಗೆ ಬಹಳಷ್ಟು ನೋವಾಗಿದೆ. ಶ್ರೀಗಳು ಆ ರೀತಿ ಮಾತನಾಡಬಾರದಿತ್ತು. ಪಂಚಮಸಾಲಿ ಹೋರಾಟದಲ್ಲಿ ನಾವೆಲ್ಲಾ ಪಕ್ಷಾತೀತವಾಗಿ ಪಾಲ್ಗೊಂಡಿದ್ದೆವು. ಮೀಸಲು ಕ್ಷೇತ್ರ ಸೇರಿ ಇನ್ನುಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಗೆಲ್ಲಲು ಲಿಂಗಾಯತ ಪಂಚಮಸಾಲಿಗರು ಕಾರಣ ಎಂದು ಅಸಮಾಧಾನ ಹೊರಹಾಕಿದರು.
ನಾವು ಬೆಂಬಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ: ನೀವು ಕೂಡಲಸಂಗಮ ಶ್ರೀಗಳ ಪ್ರತಿಭಟನೆಗೆ ಬೆಂಬಲಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಕಾಂಗ್ರೆಸ್ ಪಕ್ಷ, ಅವರು ಬಿಜೆಪಿಯವರು. ಸಮಾಜ ಮತ್ತು ಪಕ್ಷ ಬೇರೆ ಬೇರೆ. ಹಾಗಾಗಿ, ಅವರ ಪ್ರತಿಭಟನೆಗೆ ನಾವು ಬೆಂಬಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಖಾರವಾಗಿ ಉತ್ತರಿಸಿದರು.
ಪಕ್ಷದ ಆಂತರಿಕ ವಿಚಾರದಲ್ಲಿ ಸ್ವಾಮೀಜಿಗಳು ತಲೆ ಹಾಕುವುದು ಎಷ್ಟು ಸರಿ? ಎಂಬ ಪ್ರಶ್ನೆಗೆ, ಸರ್ಕಾರಕ್ಕೆ ಸ್ವಾಮೀಜಿ ಮತ್ತು ಮಠಮಾನ್ಯರು ಮಾರ್ಗದರ್ಶನ ಕೊಡಬೇಕು. ಎಲ್ಲಾದರೂ, ಏನಾದರೂ ತಪ್ಪಿದ್ದರೆ ಸಲಹೆ ನೀಡಬೇಕು. ಅದು ಇತಿಮಿತಿಯಲ್ಲಿ ಇರಬೇಕು. ಅದು ಅತೀ ಆಗಬಾರದು ಎಂದು ಸಚಿವರು ಅಸಮಾಧಾನ ಹೊರಹಾಕಿದರು.
ನಮ್ಮದು ರೈತಪರ ಸರ್ಕಾರ : ಹಾಲಿನ ದರದ ಬಗ್ಗೆ ರೈತರಿಗೆ ಸಂತೋಷ ಸುದ್ದಿ ಕೊಟ್ಟಿದ್ದೇವೆ. 4 ರೂ. ಏರಿಸಿರುವ ಹಣವನ್ನು ನೇರವಾಗಿ ರೈತರಿಗೆ ಪಾವತಿಸುತ್ತೇವೆ. ಆ ಹಣವನ್ನು ಕೆಎಂಎಫ್ ಇಟ್ಟುಕೊಳ್ಳುವುದಿಲ್ಲ. ಈ ಮೂಲಕ ತಮ್ಮದು ರೈತಪರ ಸರ್ಕಾರ ಎಂದು ಸಮರ್ಥಿಸಿಕೊಂಡರು.
Laxmi News 24×7