ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (RCB vs CSK) ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಆರ್ಸಿಬಿ 50 ರನ್ಗಳ ಬೃಹತ್ ಜಯ ಸಾಧಿಸಿದೆ.
ಆರ್ಸಿಬಿ ನೀಡಿದ 196 ರನ್ಗಳ ಗುರಿ ಬೆನ್ನಟ್ಟಿದ ಸಿಎಸ್ಕೆ 146 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ ಆರ್ಸಿಬಿ 18 ಆವೃತ್ತಿಗಳ ಐಪಿಎಲ್ (IPL 2025) ಇತಿಹಾಸದಲ್ಲಿ ಎರಡನೇ ಬಾರಿಗೆ ಚೆಪಾಕ್ ಕ್ರೀಡಾಂಗಣದಲ್ಲಿ ಚೆನ್ನೈ ವಿರುದ್ಧ ಜಯಗಳಿಸಿದ ಸಾಧನೆ ಮಾಡಿದೆ.
ಅಲ್ಲದೆ, ಬೆಂಗಳೂರು ಈ ಸೀಸನ್ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಇತ್ತ ಆರ್ಸಿಬಿ ಗೆಲುವು ಸಾಧಿಸುತ್ತಿದ್ದಂತೆ ಅತ್ತ ಸೋಶಿಯಲ್ ಮೀಡಿಯಾದಲ್ಲಿ ಮಾಜಿ ಸಿಎಸ್ಕೆ ಆಟಗಾರ ಅಂಬಟಿ ರಾಯುಡುರನ್ನು (Ambati Rayudu) ಆರ್ಸಿಬಿ ಅಭಿಮಾನಿಗಳು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಟ್ರೋಲಿಗರಿಗೆ ಆಹಾರವಾದ ರಾಯುಡು
ವಾಸ್ತವವಾಗಿ ಆರ್ಸಿಬಿ ತಂಡವನ್ನು ಬಹಿರಂಗವಾಗಿಯೇ ಟೀಕಿಸುವ ಆಟಗಾರರ ಪಟ್ಟಿಯಲ್ಲಿ ಸದಾ ಅಗ್ರಸ್ಥಾನದಲ್ಲಿರುವ ಅಂಬಟಿ ರಾಯುಡು, ಆರ್ಸಿಬಿ ಟ್ರೋಫಿ ಗೆಲ್ಲದಿರುವುದನ್ನು ಯಾವಾಗಲೂ ಗೇಲಿ ಮಾಡುತ್ತಿರುತ್ತಾರೆ. ಆರ್ಸಿಬಿ ಫ್ರಾಂಚೈಸಿಯ ಜೊತೆಗೆ ಅಭಿಮಾನಿಗಳನ್ನು ತನ್ನ ಹೇಳಿಕೆಗಳಿಂದ ಕೆರಳಿಸುವ ರಾಯುಡು, ವಿಶ್ವ ಕ್ರಿಕೆಟ್ನ ದಿಗ್ಗಜ ಬ್ಯಾಟರ್ ಕೊಹ್ಲಿಯನ್ನು ಟಿ20 ಕ್ರಿಕೆಟ್ಗೆ ಅಸಮರ್ಥ ಆಟಗಾರ ಎಂಬಂತೆಯೂ ಮಾತನಾಡುತ್ತಾರೆ. ಇದೀಗ ಚೆನ್ನೈ ತಂಡವನ್ನು ಅವರ ನೆಲದಲ್ಲೇ ಆರ್ಸಿಬಿ ಮಣಿಸಿರುವ ಖುಷಿಯಲ್ಲಿರುವ ಆರ್ಸಿಬಿ ಫ್ಯಾನ್ಸ್, ಅಂಬಟಿ ರಾಯುಡು ಇನ್ನೊಂದು ವಾರ ಸೋಶಿಯಲ್ ಮೀಡಿಯಾವನ್ನು ನೋಡದಂತೆ ಟ್ರೋಲ್ ಮಾಡುತ್ತಿದ್ದಾರೆ
Laxmi News 24×7