ಹಾವೇರಿ: ಜಮೀನಿನ ರಸ್ತೆ ವಿವಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ಅಣ್ಣನ ಮಗನಿಂದಲೇ ಮಚ್ಚಿನಿಂದ ಹಲ್ಲೆಗೊಳಗಾಗಿದ್ದ ವ್ಯಕ್ತಿ ಚಿಕಿತ್ಸೆಗೆ ಸ್ಫಂದಿಸದೇ ಶುಕ್ರವಾರ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಹಾವೇರಿಯ ಉಳಿವೆಪ್ಪ ಅಕ್ಕಿ (68) ಗಂಭೀರ ಗಾಯಗಳಿಂದ ಸಾವನ್ನಪ್ಪಿದವರು.
ಕಳೆದ ಮಂಗಳವಾರ (ಮಾರ್ಚ್ 25) ಹಾವೇರಿಯ ಜನನಿಬಿಡ ಪ್ರದೇಶವಾದ ಎಂ.ಜಿ.ರಸ್ತೆಯಲ್ಲಿ ಆರೋಪಿ ಬಸವರಾಜ್ ತನ್ನ ಚಿಕ್ಕಪ್ಪ ಉಳಿವೆಪ್ಪನ ಮೇಲೆ ಮಚ್ಚಿನಿಂದ ಮನಬಂದಂತೆ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದ. ಗಣಪತಿ ದೇವಾಲಯದ ಎದುರು ದೇವರಿಗೆ ಕೈ ಮುಗಿಯುತ್ತಿರುವಾಗಲೇ ಹಲ್ಲೆ ನಡೆಸಿದ್ದ. ಇದರಿಂದ ಗಂಭೀರ ಗಾಯಗೊಂಡ ಅವರಿಗೆ ಹಾವೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ಗೆ ದಾಖಲಿಸಲಾಗಿತ್ತು.
ಜಮೀನಿಗೆ ರಸ್ತೆ ವಿಚಾರದಲ್ಲಿ ಮೃತ ಉಳಿವೆಪ್ಪ ಮತ್ತು ಬಸವರಾಜ ನಡುವೆ ಗಲಾಟೆಯಾಗಿತ್ತು. ಈ ಕುರಿತಂತೆ ಇಬ್ಬರು ಸರ್ವೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಸರ್ವೆಗೆ ಅಧಿಕಾರಿ ಬಂದರೂ ಬಸವರಾಜ್ ಜಮೀನಿಗೆ ಬಂದಿರಲಿಲ್ಲ. ಹೀಗಾಗಿ, ಬಸವರಾಜ್ಗೆ ಉಳಿವೆಪ್ಪಗೆ ಬುದ್ದಿಮಾತು ಹೇಳಿದ್ದರು. ಇದರಿಂದ ಕೋಪಗೊಂಡ ಬಸವರಾಜ್ ಚಿಕ್ಕಪ್ಪನ ಮೇಲೆಯೇ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ ಎಂದು ಅವರ ಮಗ ಮಹೇಶ್ ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರತ್ಯೇಕ ಪ್ರಕರಣ – ಮೂವರಿಗೆ ಚಾಕು ಇರಿತ: ಅಡವಿಟ್ಟ ಬೈಕ್ ವಾಪಸ್ ಕೇಳಲು ಹೋಗಿದ್ದ ವೇಳೆ ಮೂವರಿಗೆ ಚಾಕುವಿನಿಂದ ಇರಿದ ಘಟನೆ ಹಾವೇರಿಯಲ್ಲಿ ನಡೆದಿದೆ. ಹಾವೇರಿ ಸುಭಾಸ್ ವೃತ್ತದಲ್ಲಿ ಶುಕ್ರವಾರ ಘಟನೆ ನಡೆದಿದ್ದು, ಮೂವರು ಗಾಯಗೊಂಡಿದ್ದಾರೆ.
Laxmi News 24×7