ಗಂಗಾವತಿ(ಕೊಪ್ಪಳ): ಇಸ್ರೇಲ್ ಮಹಿಳೆ ಸೇರಿದಂತೆ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಓರ್ವನ ಕೊಲೆ ಪ್ರಕರಣ ನಡೆದ ಬೆನ್ನಲ್ಲೇ ಕೊಪ್ಪಳ ಮತ್ತು ಗಂಗಾವತಿ ತಾಲೂಕಿನ ರೆಸಾರ್ಟ್ ಮತ್ತು ಹೋಂ ಸ್ಟೇ ಮಾಲೀಕರ ಜೊತೆ
ಭಾನುವಾರ ಸಂಜೆ ಇಲ್ಲಿನ ಡಿವೈಎಸ್ಪಿ ಕಚೇರಿಯಲ್ಲಿ ಎಸ್ಪಿ ರಾಮ್ ಎಲ್. ಅರಸಿದ್ದಿ ಪ್ರತ್ಯೇಕ ಸರಣಿ ಸಭೆಗಳನ್ನು ನಡೆಸಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚನೆ ನೀಡಿದರು.
ಎಸ್ಪಿ ರಾಮ್ ಎಲ್. ಅರಸಿದ್ದಿ ಮಾತನಾಡಿ, “ವಿದೇಶಿಗರು ಬಂದಾಗ ಅವರ ಸಂಪೂರ್ಣ ಮಾಹಿತಿ ಇರುವ ಅರ್ಜಿ ನಮೂನೆ ಸಿ ಕಡ್ಡಾಯವಾಗಿ ಭರ್ತಿ ಮಾಡಿಕೊಡಬೇಕು. ಯಾವುದೇ ಅಕ್ರಮ ಚಟುವಟಿಕೆ, ಅನೈತಿಕ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಅಲ್ಲದೇ ರೆಸಾರ್ಟ್, ಹೋಂ ಸ್ಟೇಗಳಲ್ಲಿ ವಿದೇಶಿಗರಿಗೆ ಮದ್ಯ, ಗಾಂಜಾ, ಕೊಕೇನ್ನಂಥಹ ನಿಷೇಧಿತ ಪದಾರ್ಥಗಳನ್ನು ಮಾರಾಟ ಮಾಡುವುದು, ಉತ್ತೇಜಿಸುವುದು ಮಾಡಬಾರದು” ಎಂದರು.”ಇಲಾಖೆಯ ಅಧಿಕಾರಿಗಳು ನಿರಂತರವಾಗಿ ರೆಸಾರ್ಟ್, ಹೋಂ ಸ್ಟೇಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಪ್ರವಾಸಕ್ಕೆಂದು ಬರುವ ವಿದೇಶಿಗರಿಗೆ ಸೂಕ್ತ ಭದ್ರತೆ ಕಲ್ಪಿಸುವ ಜವಾಬ್ದಾರಿ ಆಯಾ ರೆಸಾರ್ಟ್ ಮಾಲೀಕರದ್ದಾಗಿದೆ. ಲೋಪದೋಷಗಳಾದರೆ ಮಾಲೀಕರನ್ನೇ ಹೊಣೆ ಮಾಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ರಾತ್ರಿ 10 ಗಂಟೆಯ ಬಳಿಕ ಯಾರೂ ಸಂಚಾರ ಮಾಡುವಂತಿಲ್ಲ. ಮುಖ್ಯವಾಗಿ ಮಧ್ಯರಾತ್ರಿಗಳಲ್ಲಿ ವನ್ಯಪ್ರಾಣಿಗಳು ಸಂಚರಿಸುವಾಗ ಮತ್ತು ನಿರ್ಜನ ಪ್ರದೇಶಗಳಿಗೆ ವಿದೇಶಿಗರನ್ನು ಕರೆದೊಯ್ಯುವಂತಿಲ್ಲ. ಹೋಂ ಸ್ಟೇಗಳನ್ನು ನಡೆಸಲು ಸಂಬಂಧಿತ ಇಲಾಖೆ ಮತ್ತು ಪ್ರಾಧಿಕಾರದಿಂದ ಸೂಕ್ತ ಪರವಾನಿಗೆ ಕಡ್ಡಾಯವಾಗಿ ಪಡೆಯಬೇಕು” ಎಂದು ಸೂಚನೆ ನೀಡಿದರು.
Laxmi News 24×7