ತುಮಕೂರು: “ನನಗೆ ತುಮಕೂರು ಲೋಕಸಭೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಆಸೆ ಇದೆ.
ಹೈಕಮಾಂಡ್ನವರು ಸ್ಪರ್ಧೆಗೆ ಅವಕಾಶ ನೀಡಿದರೆ ನಿಲ್ಲುತ್ತೇನೆ. ಇಲ್ಲ ಎಂದರೆ ಸುಮ್ಮನ್ನೇ ಇರ್ತೇನಿ ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಹೇಳಿದರು. ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇನ್ಮುಂದೆ ರಾಜ್ಯ ವಿಧಾನಸಭೆ ಸೇರಿದಂತೆ ಯಾವ ಚುನಾವಣೆಗೂ ನಿಲ್ಲಲ್ಲ, ಈಗ ಲೋಕಸಭೆಯ ಅನುಭವಕ್ಕಾಗಿ ಚುನಾವಣೆ ಸ್ಪರ್ಧಿಸಲು ಬಯಸಿದ್ದೇನೆ” ಎಂದು ತಿಳಿಸಿದರು.
“ರಾಜ್ಯದಲ್ಲಿ ಬಹಳ ದಿನದಿಂದ ಬಿಜೆಪಿಯ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕರ ಸ್ಥಾನ ನೆನೆಗುದಿಗೆ ಬಿದಿತ್ತು. ಈಗ ಕೇಂದ್ರ ಬಿಜೆಪಿ ಮುಖಂಡರಿಗೆ ಜ್ಞಾನೋದಯ ಆಗಿ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಅವರ ನೇಮಕದೊಂದಿಗೆ ಬಿಜೆಪಿ ಪಕ್ಷದಲ್ಲಿ ಅಸಮಾಧಾನ ಎದ್ದಿದೆ. ಯಾವುದೋ ನಾಲ್ಕು ಬೈ ಎಲೆಕ್ಷನ್ ಗೆಲ್ಲಿಸಿದ್ದ ಮಾತ್ರಕ್ಕೆ ವಿಜಯೇಂದ್ರ ಅವರಿಗೆ ದೊಡ್ಡ ಸಂಘಟನಾ ಚತುರ ಎಂದು ಸರ್ಟಿಫಿಕೇಟ್ ಕೊಡೋಕೆ ಆಗಲ್ಲ” ಎಂದರು.
“ಜೆಡಿಎಸ್-ಬಿಜೆಪಿ ಸೀಟು ಹಂಚಿಕೆ ಮತ್ತು ಇತರ ವಿಚಾರಗಳಿಂದ ಅವರ ಪಾರ್ಟಿಯಲ್ಲಿ ಗೊಂದಲ ಇದೆ. ವಿಜಯೇಂದ್ರ ಅವರಿಗೆ ಯಡಿಯೂರಪ್ಪ ಹೆಸರೇ ಬಂಡವಾಳ. ಮುಂದಿನ ದಿನಗಳಲ್ಲಿ ನೋಡೋಣ. ಪಕ್ಷ ಕಟ್ಟುವುದರ ಜೊತೆಗೆ ಹೇಗೆ ಜನರ ವಿಶ್ವಾಸ ಗಳಿಸುತ್ತಾರೆ ಎಂಬುದು ಮುಖ್ಯ. ಪಕ್ಷ ಕಟ್ಟಿದಾಕ್ಷಣಕ್ಕೆ ವಿಶ್ವಾಸಗಳಿಸದೇ ಇದ್ದರೆ ಏನು ಪ್ರಯೋಜನ, ಮುಂದು ಕಾದು ನೋಡಬೇಕು” ಎಂದರು.