ಬೆಂಗಳೂರು,ನ.6- ಬಹುನೀರಿಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ವರಿಷ್ಠರ ಜೊತೆ ಚರ್ಚಿಸಲು ಇದೇ 11ರಂದು ದೆಹಲಿಗೆ ತೆರಳುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಫಲಿತಾಂಶಕ್ಕಾಗಿ ನಾನು ಕೂಡ ಕಾತುರದಿಂದ ಎದುರು ನೋಡುತ್ತಿದ್ದೇನೆ. ಫಲಿತಾಂಶ ಪ್ರಕಟಗೊಂಡ ನಂತರ ಮೊದಲು ಫೋನ್ ಮೂಲಕ ರಾಷ್ಟ್ರೀಯ ನಾಯಕರನ್ನು ಸಂಪರ್ಕಿಸಿ ಸಂಪುಟ ವಿಸ್ತರಣೆ ಮಾಡಬೇಕೆ ಇಲ್ಲವೇ ದೆಹಲಿಗೆ ಬರಬೇಕೇ ಎಂದು ಕೇಳುತ್ತೇನೆ.
ನಿಮ್ಮ ವಿವೇಚನೆಯಂತೆ ನಿರ್ಧಾರ ಕೈಗೊಳ್ಳಿ ಎಂದು ವರಿಷ್ಠರು ಸೂಚಿಸಿದರೆ ಸಂಪುಟ ವಿಸ್ತರಣೆಗೆ ಶೀಘ್ರದಲ್ಲೇ ದಿನಾಂಕವನ್ನು ನಿಗದಿಪಡಿಸಲಾಗುವುದು. ಒಂದು ವೇಳೆ ದೆಹಲಿಗೆ ಬರಬೇಕೆಂದು ಸೂಚಿಸಿದರೆ ನ.11ರಂದು ದೆಹಲಿಗೆ ತೆರಳುವುದಾಗಿ ತಿಳಿಸಿದರು.
ಈ ಬಾರಿ ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಎಂಬುದು ವರಿಷ್ಠರ ತೀರ್ಮಾನದ ಮೇಲೆ ನಿರ್ಧಾರವಾಗಲಿದೆ. ಯಾವುದಕ್ಕೂ ಎರಡು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಬಂದ ನಂತರವೇ ತೀರ್ಮಾನವಾಗಲಿದೆ ಎಂದು ಸ್ಪಷ್ಟಪಡಿಸಿದರು.