ಗಂಗಾವತಿ (ಕೊಪ್ಪಳ) : ಗಾಯನ ಎನ್ನುವ ಶಕ್ತಿಗೆ ಎಂಥ ವ್ಯಕ್ತಿಯನ್ನಾದರೂ ಸೆಳೆದುಕೊಳ್ಳುವ ಮಾಂತ್ರಿಕತೆ ಇದೆ.
ಇಂತಹ ಗಾಯನ ಇದೀಗ ಗಂಗಾವತಿಯ ಶಾಸಕ ಜಿ.ಜನಾರ್ದನ ರೆಡ್ಡಿ ಅವರನ್ನು ಮೈಕು ಹಿಡಿದು ಹಾಡು ಹೇಳಿಸುವಂತೆ ಮಾಡಿದ್ದು, ಜನರ ಕುತೂಹಲಕ್ಕೆ ಕಾರಣವಾಯಿತು.
ನಗರದಲ್ಲಿಂದು ಖಾಸಗಿ ಕರೋಕೆ ಮೆಲೋಡೀಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಸಕರನ್ನು ಹಿಂಬಾಲಕರು ಮತ್ತು ಅಭಿಮಾನಿಗಳು ಒಂದು ಹಾಡು ಹೇಳುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರೆಡ್ಡಿ, “ಇಲ್ಲ ನನಗೆ ಹಾಡು ಹಾಡಲು ಬರುವುದಿಲ್ಲ. ಬೇಕಿದ್ದರೆ ಭಾಷಣ ಮಾಡುತ್ತೇನೆ” ಎಂದು ಹೇಳಿದರು. ಆದರೆ, ಪಟ್ಟುಬಿಡದ ಅಭಿಮಾನಿಗಳು ಭಾಷಣ ಸದಾಕಾಲ ಮಾಡುತ್ತೀರಿ. ಆದರೆ ಒಂದೇ ಒಂದು ಹಾಡು ಹಾಡುವಂತೆ ದುಂಬಾಲುಬಿದ್ದರು.
ಅಭಿಮಾನಿಗಳು ಮತ್ತು ಹಿಂಬಾಲಕರ ಅಭಿಮಾನಕ್ಕೆ ಮಣಿದ ರೆಡ್ಡಿ, ತನಗೆ ಬಂದ ಶೈಲಿಯಲ್ಲಿ ಹಾಡು ಹೇಳುವುದಾಗಿ ತಿಳಿಸಿದರು. ಈ ಜಗತ್ತು ನಡೆಯುತ್ತಿರುವುದು ಒಂದು ಹೊತ್ತಿನ ತುತ್ತಿನ ಚೀಲ ತುಂಬಿಸುವುದಕ್ಕಾಗಿ ಅಲ್ವಾ? ಅದಕ್ಕಾಗಿ ಅದೇ ಹಾಡನ್ನು ಹಾಡುತ್ತೇನೆ ಎಂದರು.
ರೆಡ್ಡಿ ಅವರಿಗೆ ಅದೇನನ್ನಿಸಿತೋ ಏನೋ, ಕನ್ನಡನಾಡಿನ ಹಿರಿಯ ನಟ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಸಾಹಿತಿ ವೇಣುಗೋಪಾಲ ಕಾಸರಗೋಡು ಅವರ ಕಾದಂಬರಿ ಆಧಾರಿತ ‘ಜಿಮ್ಮಿಗಲ್ಲು’ ಎಂಬ ಸಿನಿಮಾದಿಂದ ಹಾಡೊಂದನ್ನು ಆಯ್ದುಕೊಂಡರು.ಖುಷಿ ಅಲೆಯಲ್ಲಿ ತೇಲಿದ ಅಭಿಮಾನಿಗಳು: ಮೈಕು ಹಿಡಿದ ಶಾಸಕ ರೆಡ್ಡಿ, ‘ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ, ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ’ ಎಂಬ ಇಡೀ ಹಾಡು ಹಾಡುವ ಮೂಲಕ ತಮ್ಮ ಅಭಿಮಾನಿಗಳನ್ನು ಖುಷಿಯ ಅಲೆಯಲ್ಲಿ ತೇಲಿಸಿದರು.