ಬೆಂಗಳೂರು : ನಮ್ಮ ಕುಟುಂಬದ ಯಾವೊಬ್ಬ ವ್ಯಕ್ತಿ ಹೆಸರಲ್ಲಿ ನೈಸ್ ಆಸ್ತಿ ಇಲ್ಲ. ಒಂದು ವೇಳೆ ನಮ್ಮ ಕುಟುಂಬದ ಒಬ್ಬರ ಹೆಸರಲ್ಲಿ ಜಮೀನು ಇದ್ದರೂ ಇಡೀ ಕುಟುಂಬ ರಾಜಕೀಯ ನಿವೃತ್ತಿ ಪಡೆಯುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಇಂದು ನಡೆಯುತ್ತಿರುವ ಕೋರ್ ಕಮಿಟಿ ಸಭೆಗೂ ಮುನ್ನ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನೈಸ್ ವಿಚಾರವಾಗಿ ಸಂಸದ ಡಿ ಕೆ ಸುರೇಶ್ ಹೇಳಿಕೆ ವಿಚಾರಕ್ಕೆ ಗರಂ ಆದರು. ನೈಸ್ ಕಂಪನಿಗೆ ಸಹಿ ಹಾಕಿದ್ದು ಯಾರು?. ಅವನ (ಒನರ್) ಜೊತೆ ಶಾಮೀಲಾಗಿ ಜಮೀನು ಹೊಡೀಲಿ ಅಂತ ದೇವೇಗೌಡರು ಸಹಿ ಹಾಕಿದರಾ?. ಒಂದು ಸಣ್ಣ ಸಾಕ್ಷಿ ಇದ್ದರೆ ತೋರಿಸಲಿ ದೇವೇಗೌಡರ ಕುಟುಂಬವೇ ರಾಜಕೀಯ ನಿವೃತ್ತಿ ಹೊಂದುತ್ತೇವೆ. ಸಹಿ ಯಾರು ಹಾಕಿದ್ದು ಗೊತ್ತಿದೆಯಾ ಅವನಿಗೆ. ಅವತ್ತಿನ ಯುಡಿ ಮಿನಿಸ್ಟರ್ ಯಾರು ಇದ್ದಿದ್ದು, ಇವನ ಅಣ್ಣನೇ ಅಲ್ವಾ, ಅವನೇ ತಾನೆ ಸಹಿ ಹಾಕಿದ್ದು. ಯಾರ ಹೆಸರಿಗೆ ಮಾಡಲು ಹೊರಟಿದ್ದೀರಾ, ನಿಮ್ಮ ಕುಟುಂಬಕ್ಕೆ ಮಾಡಲು ಹೊರಟಿದ್ದೀರಾ?. ನಮ್ಮ ಬಗ್ಗೆ ಮಾತಾಡ್ತೀರಾ ನೀವು ಎಂದು ಏಕವಚನದಲ್ಲೇ ಡಿಕೆ ಬ್ರದರ್ಸ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.