ಹುಬ್ಬಳ್ಳಿ: ಅವರಿಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ರು.
ಅವರಿಬ್ಬರ ಮದುವೆಗೆ ಜಾತಿಯೂ ಅಡ್ಡ ಬಂದಿರಲಿಲ್ಲ. ಅವರಿಬ್ಬರಿಗೆ ಮುದ್ದಾದ ಗಂಡು ಮಗು ಕೂಡಾ ಇದೆ. ಆದ್ರೆ ಪ್ರೀತಿಸಿ ಕೈ ಹಿಡಿದವಳನ್ನೇ ಗಂಡನೆ ಕತ್ತು ಹಿಸುಕಿ ಕೊಲೆ ಮಾಡಿ ಬಾಗಿಲು ಹಾಕಿಕೊಂಡು ಪರಾರಿಯಾಗಿರುವ ಘಟನೆ ಹುಬ್ಬಳ್ಳಿಯ ನೇಕಾರನಗರದಲ್ಲಿ ನಡೆದಿದೆ.
ನೇಕಾರ ನಗರದ ಜನ ಇವತ್ತು ಬೆಳ್ಳಂಬೆಳಗ್ಗೆ ಬೆಚ್ಚಿ ಬಿದ್ದಿದ್ದಾರೆ. ಅದಕ್ಕೆ ಕಾರಣ ಪ್ರೀತಿಸಿ ಮದುವೆಯಾದ ಗಂಡನೇ ತನ್ನ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಸುಧಾ (24) ಮೃತ ಪತ್ನಿಯಾದ್ರೆ, ಶಿವಯ್ಯ ಹಿರೇಮಠ ಎಂಬಾತನೇ ಕೊಲೆ ಆರೋಪಿಯಾಗಿದ್ದಾನೆ.
ಶಿವಯ್ಯ ಮತ್ತು ಸುಧಾ ಅವರು ಬೇರೆ ಬೇರೆ ಸಮುದಾಯಕ್ಕೆ ಸೇರಿದವರು. ಆದ್ರೂ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ರು. ಸುಧಾ ಶಿವಯ್ಯ ದಂಪತಿಗೆ ಮುದ್ದಾದ ಮಗು ಕೂಡಾ ಜನಿಸಿತ್ತು. ಸುಧಾ ತಾಯಿನೇ ಮುಂದೆ ನಿಂತು ಹೆರಿಗೆ ಕಾರ್ಯಕ್ರಮ ಮುಗಿಸಿ ಕೆಲವೇ ದಿನಗಳ ಹಿಂದೆ ಮನೆಗೆ ಹೋಗಿದ್ರು.
ಆದ್ರೆ ನಿನ್ನೆ ರಾತ್ರಿ ಸುಧಾ ಮತ್ತು ಶಿವಯ್ಯ ನಡುವೆ ಜಗಳ ನಡೆದು ಜಗಳ ವಿಕೋಪಕ್ಕೆ ತಿರುಗಿ ಶಿವಯ್ಯ ಸುಧಾ ಮಲಗಿರೋ ವೇಳೆ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಬೆಳಗಿನ ಜಾವ ನೀರು ಬಂದಾಗ ಸುಧಾ ಬಾಗಿಲು ತೆಗೆದಿಲ್ಲ. ಅಲ್ಲದೆ ಮಗು ಕೂಡಾ ಒಳಗೆ ಅಳ್ತಾ ಇತ್ತು. ಗಮನಿಸಿ ಅಕ್ಕ ಪಕ್ಕದ ನಿವಾಸಿಗಳು ಬಾಗಿಲು ತೆಗೆದಾಗ ಸುಧಾ ಎದ್ದಿಲ್ಲ. ಅಲ್ಲದೆ ಉಸಿರಾಟ ಕೂಡ ಬಂದ್ ಆಗಿತ್ತು. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುಧಾಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.