Breaking News
Home / ರಾಜಕೀಯ / ಆತಂಕದಲ್ಲಿ ಮಕ್ಕಳ ಶಿಕ್ಷಣ; ಸರ್ಕಾರಿ ಶಾಲೆಗಳ ಗೋಳು ಕೇಳೋರು ಯಾರು..?

ಆತಂಕದಲ್ಲಿ ಮಕ್ಕಳ ಶಿಕ್ಷಣ; ಸರ್ಕಾರಿ ಶಾಲೆಗಳ ಗೋಳು ಕೇಳೋರು ಯಾರು..?

Spread the love

ಬೆಳಗಾವಿ: ರಾಜ್ಯಾದ್ಯಂತ ಶಾಲೆಗಳ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಆದರೆ, ಶಿಥಿಲಾವಸ್ಥೆಯಲ್ಲಿರುವ ಶಾಲಾ‌ ಕೊಠಡಿಗಳೇ ವಿದ್ಯಾರ್ಥಿಗಳನ್ನು ಸ್ವಾಗತಿಸುವ ದುಃಸ್ಥಿತಿ ಬೆಳಗಾವಿ ಜಿಲ್ಲೆಯಲ್ಲಿದೆ. ಹೌದು, ರಾಜ್ಯ ಸರ್ಕಾರದ ಸುತ್ತೋಲೆಯಂತೆ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲೆಗಳು ಸೋಮವಾರ ಆರಂಭವಾಗಿವೆ. ಬೆಳಗಾವಿಯಲ್ಲಿ ಮೊದಲ ದಿನ ಕೆಲವೇ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ್ದು, ಶಿಕ್ಷಕರು ಶಾಲೆ ಆರಂಭದ ಹಿನ್ನೆಲೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. 31ರಿಂದ ಎಲ್ಲ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ಶಾಲೆಯತ್ತ ಮುಖ ಮಾಡಲಿದ್ದಾರೆ. ಮಕ್ಕಳು ಉತ್ಸಾಹದಿಂದ ಶಾಲೆ ಕಡೆ ಆಗಮಿಸಲು ಸಿದ್ಧರಾಗಿದ್ದರೆ, ಶಾಲೆಗಳ ಕಟ್ಟಡಗಳು ಅಪಾಯದ ಅಂಚಿಗೆ ತಲುಪಿವೆ. ಇದರಿಂದ ಮಕ್ಕಳು ಮತ್ತು ಪಾಲಕರ ಆತಂಕಕ್ಕೆ ಕಾರಣವಾಗಿದೆ.

2,204 ಕೊಠಡಿಗಳು ಶಿಥಿಲ: ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 417 ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದರೆ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 1787 ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಇಡೀ ಜಿಲ್ಲೆಯಲ್ಲಿ ಬರೊಬ್ಬರಿ 2,204 ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಅಲ್ಲದೇ ಅನೇಕ ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿ ಮತ್ತಿತರ ಸಮಸ್ಯೆಗಳು ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಡಕಾಗಿವೆ. ಈ ಎಲ್ಲಾ ಗಂಭೀರ ಸಮಸ್ಯೆಗಳಿಂದ ಬೇಸತ್ತಿರುವ ಬಹಳಷ್ಟು ಪಾಲಕರು ತಮ್ಮ ಮಕ್ಕಳಿಗೆ ಖಾಸಗಿ ಶಾಲೆಗಳಿಗೆ ದಾಖಲು ಮುಂದಾಗುತ್ತಿದ್ದಾರೆ. ಮಹಾತ್ಮಾ ಫುಲೆ ರಸ್ತೆಯ ಹೊಸುರ‌ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ನಂ.4ರ ಎರಡು ಕೊಠಡಿಗಳು ಶಿಥಿಲಗೊಂಡಿದ್ದು, ಸೋರುವ ಸ್ಥಿತಿಗೆ ಬಂದು ತಲುಪಿವೆ. ಇನ್ನು ಗೋಡೆಗಳು ಬಿರುಕು ಬಿಟ್ಟಿವೆ. ಯಾವಾಗ ಬೇಕಾದರೂ ಬೀಳುವ ಸಾಧ್ಯತೆಯಿದೆ. 1ರಿಂದ 7ನೇ ತರಗತಿವರೆಗೆ ಇಲ್ಲಿ ಒಟ್ಟು 76 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಾರೆ. 1ರಿಂದ 3ನೇ ತರಗತಿ ಮಕ್ಕಳು ಒಂದು ಕೊಠಡಿ, 4ರಿಂದ 5ನೇ ತರಗತಿ ಮಕ್ಕಳು ಒಂದು ಕೊಠಡಿ ಮತ್ತು 6ರಿಂದ 7ನೇ ತರಗತಿ ಮಕ್ಕಳನ್ನು ಸೇರಿಸಿ‌ ಒಂದೇ ಕೊಠಡಿಯಲ್ಲಿ ಕೂಡ್ರಿಸಿ ಪಾಠ ಮಾಡಲು ಇಲ್ಲಿನ ಶಿಕ್ಷಕರು ನಿರ್ಧರಿಸಿದ್ದಾರೆ.

ಹೊಸ ಕೊಠಡಿಗಳ ನಿರ್ಮಾಣಕ್ಕೆ ಅನುದಾನ: ಈ ಸಂಬಂಧ ಮಾಧ್ಯಮಗಳ ಜೊತೆಗೆ ಮಾತನಾಡಿದ ಸರ್ಕಾರಿ ಶಾಲೆಯ ಪ್ರಧಾನ ಗುರುಗಳಾದ ಜಿನ್ನಪ್ಪ ಪರಮಾಜ ಅವರು, ”ನಮ್ಮ ಶಾಲೆಯಲ್ಲಿ ಒಟ್ಟು ಐದು ಕೊಠಡಿಗಳಿದ್ದು, ಅದರಲ್ಲಿ ಎರಡು ಹಾಳಾಗಿವೆ. ಅವುಗಳನ್ನು ನೆಲಸಮ ಮಾಡಿ ಹೊಸ ಕೊಠಡಿಗಳ ನಿರ್ಮಾಣ ಮಾಡಲು ಅನುದಾನ ಮಂಜೂರಾಗಿದ್ದು, ಪಿಡಬ್ಲ್ಯೂಡಿ ಇಲಾಖೆಗೆ ಟೆಂಡರ್ ಆಗಿದೆ. ಎಪ್ರಿಲ್​​ನಲ್ಲಿ ಅಧಿಕಾರಿಗಳು ಶಾಲೆಗೆ ಬಂದು ಚುನಾವಣೆ ಮುಗಿದ ನಂತರ ಕಟ್ಟಲು ಆರಂಭಿಸುತ್ತೇವೆ ಎಂದಿದ್ದಾರೆ” ಎಂದರು.

ಶಾಲೆಗಳಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಒತ್ತಾಯ: ಇನ್ನೂ ಕಾಕತಿವೇಸ್​ನಲ್ಲಿರುವ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂ.1 ಹಾಗೂ ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆಯಲ್ಲೂ ಕೊಠಡಿಗಳ ಹಂಚು ಒಡೆದಿವೆ. ಕುಡಿಯುವ ನೀರು, ಆಟದ ಮೈದಾ‌ನ ಸೇರಿ ಇನ್ನಿತರ ಸಮಸ್ಯೆಗಳು ಕಂಡು ಬಂದಿವೆ. ಈ ಕುರಿತು ಈಟಿವಿ ಭಾರತ ಜೊತೆಗೆ ಮಾತನಾಡಿದ ಮುಖ್ಯಶಿಕ್ಷಕಿ ಎ.ಸಿ.ಪಾರಿಶ್ವಾಡಿ ಅವರು, ಉರ್ದು ಶಾಲೆಯಲ್ಲಿ 150 ವಿದ್ಯಾರ್ಥಿಗಳಿದ್ದರೆ, ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 400 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಾರೆ. ನಮ್ಮ ಶಾಲೆಯಲ್ಲಿ ಬಹಳಷ್ಟು ಸಮಸ್ಯೆ ಇದ್ದು, ಕೊಠಡಿಗಳ ಮೇಲ್ಛಾವಣಿ ಹಾಳಾಗಿದೆ. ಶುದ್ಧ ಕುಡಿಯುವ ನೀರು ಬೇಕಿದೆ. ಕಂಪೌಂಡ್ ಸಮಸ್ಯೆ ಇದೆ. ಹೊರಗಿನ ವಿದ್ಯಾರ್ಥಿಗಳು ಶಾಲೆ ಆವರಣಕ್ಕೆ ಬಂದು ತೊಂದರೆ ಕೊಡುತ್ತಾರೆ. ನಮ್ಮ ಈ ಸಮಸ್ಯೆಗಳನ್ನು ಪರಿಹರಿಸಿದರೆ ತುಂಬಾ ಅನುಕೂಲ ಆಗುತ್ತದೆ” ಎನ್ನುತ್ತಾರೆ.

ಜಿಲ್ಲಾಧಿಕಾರಿ ಹೇಳಿದ್ದೇನು?: ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರನ್ನು ಈಟಿವಿ ಭಾರತ ಸಂಪರ್ಕಿಸಿದ ವೇಳೆ, ಶಾಲಾ ಕೊಠಡಿಗಳ ಶಿಥಿಲಾವಸ್ಥೆ ಬಗ್ಗೆ ಪ್ರಶ್ನಿಸಿದಾಗ, ”ಶಿಥಿಲಗೊಂಡಿರುವ ಕೊಠಡಿಗಳನ್ನು ಬಳಸದಂತೆ ಈಗಾಗಲೇ ಸೂಚನೆ ನೀಡಿದ್ದೇನೆ. ಕಳೆದ ವರ್ಷ ವಿವೇಕ ಯೋಜನೆಯಡಿ‌ ಪ್ರತಿ ಶಾಸಕರಿಗೆ 20 ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಸರ್ಕಾರ ಕೊಟ್ಟಿದೆ. ಆ ಅನುದಾನ ಎಲ್ಲೆಲ್ಲಿ ಬಳಸಬೇಕು ಎಂಬುದನ್ನು ಆಯಾ ಶಾಸಕರೇ ನಿರ್ಧರಿಸಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಒಂದು ಕೊಠಡಿಯನ್ನೂ ಕೊಟ್ಟಿಲ್ಲ. 200 ಶಾಲೆಗಳಲ್ಲಿ ನಾವು ರಿಪೇರಿ ಮಾಡಿಸಿದ್ದೇವೆ. ಅದಾಗಿಯೂ ಕೊಠಡಿಗಳ ಕೊರತೆ ಇರುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುತ್ತೇವೆ” ಎಂದು ಅವರು ಪ್ರತಿಕ್ರಿಯಿಸಿದರು. ಬೆಳಗಾವಿ ಜಿಲ್ಲೆಯಲ್ಲಿರುವ 5,215 ಶಾಲೆಗಳ ಪ್ರಾರಂಭಕ್ಕೆ ಎಲ್ಲ ರೀತಿ ತಯಾರಿ ನಡೆಯುತ್ತಿದ್ದು, ಸರ್ಕಾರ ಮತ್ತು ಶಿಕ್ಷಣ ಇಲಾಖೆ ಶಾಲೆಗಳಲ್ಲಿನ ಕೊಠಡಿಗಳ ಕೊರತೆ, ಮೂಲ ಸೌಲಭ್ಯ ಸೇರಿದಂತೆ ಎಲ್ಲ ಸಮಸ್ಯೆಗಳ ನಿವಾರಣೆಗೆ ಮುಂದಾಗಬೇಕಿದೆ


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ