ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಅಚ್ಚರಿಯ ಘಟನೆಯೊಂದು ವರದಿಯಾಗಿದೆ. ಮೃತಪಟ್ಟ ಪತಿಯ ದೇಹವನ್ನು ಪತ್ನಿ ಮನೆಯಲ್ಲೇ ಸುಟ್ಟು ಹಾಕಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಮೃತಪಟ್ಟ ಪತಿಯ ಶವವನ್ನು ಮನೆಯಲ್ಲೇ ಸುಟ್ಟು ಹಾಕಿದ ಪತ್ನಿಕರ್ನೂಲ್, ಆಂಧ್ರಪ್ರದೇಶ: ಯಾರಾದರೂ ಮೃತಪಟ್ಟರೆ ಅವರನ್ನು ಕುಟುಂಬಸ್ಥರು ಮತ್ತು ಸಂಬಂಧಿಕರಿಗೆ ಮಾಹಿತಿ ನೀಡಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡುತ್ತಾರೆ.
ಆದರೆ, ಪತಿಯ ಸಾವಿನ ವಿಚಾರ ತಿಳಿದ ಪತ್ನಿ ಮೃತದೇಹವನ್ನು ಮನೆಯಯೊಳಗೇ ಬೆಂಕಿ ಹಚ್ಚಿ ದಹಿಸಿದ್ದಾಳೆ. ಈ ಘಟನೆ ಕರ್ನೂಲ್ ಜಿಲ್ಲೆಯ ಪತ್ತಿಕೊಂಡ ಪಟ್ಟಣದಲ್ಲಿ ಸೋಮವಾರ ನಡೆದಿದ್ದು, ಸಂಚಲನ ಮೂಡಿಸಿದೆ.
ಘಟನೆಯ ವಿವರ: ಕರ್ನೂಲ್ ಜಿಲ್ಲೆಯ ಪತ್ತಿಕೊಂಡ ಪಟ್ಟಣದ ಹರಿಕೃಷ್ಣ ಪ್ರಸಾದ್ (60) ಮೃತ ವ್ಯಕ್ತಿಯಾಗಿದ್ದಾರೆ. ದೇಹವನ್ನು ಸುಟ್ಟು ಹಾಕಿದ ಲಲಿತಾ ಮೆಡಿಕಲ್ ಶಾಪ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದು, ಇಬ್ಬರೂ ವೈದ್ಯರೇ. ಹಿರಿಯ ಮಗ ದಿನೇಶ್ ಕರ್ನೂಲ್ನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರೆ, ಕಿರಿಯ ಮಗ ಮುಖೇಶ್ ಕೆನಡಾದಲ್ಲಿ ಡಾಕ್ಟರ್ ಆಗಿದ್ದಾರೆ. 2016 ರಿಂದ ಹರಿಕೃಷ್ಣ ಪ್ರಸಾದ್ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇತ್ತು.
ಹಾಸಿಗೆ ಹಿಡಿದಿದ್ದ ಹರಿಕೃಷ್ಣ: ಕೆಲ ವರ್ಷಗಳಿಂದ ಹರಿಕೃಷ್ಣ ಅವರು ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದಿದ್ದರು. ಒಂದೆಡೆ ಪತ್ನಿ ಲಲಿತಾ ಅವರು ಮೆಡಿಕಲ್ ಶಾಪ್ ನಡೆಸುತ್ತಲೇ ಗಂಡನ ಸೇವೆ ಮಾಡುತ್ತಿದ್ದರು. ಸೋಮವಾರ ಬೆಳಗ್ಗೆ ಹರಿಪ್ರಸಾದ್ ಅವರಿಗೆ ಹೃದಯಾಘಾತವಾಗಿ ನಿಧನರಾಗಿದ್ದಾರೆ ಎನ್ನಲಾಗಿದೆ. ಪತಿಯ ನಾಡಿ ಹಿಡಿದು ನೋಡಿದ ಪತ್ನಿ, ಸಾವನ್ನಪ್ಪಿದ್ದಾನೆ ಎಂದು ತಿಳಿದು, ಸಾವಿನ ವಿಷಯವನ್ನು ಹಿರಿಯ ಮಗನಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ.