ಕಾಗವಾಡ: ತಾಲ್ಲೂಕಿನ ಉತ್ತರ ಭಾಗದಲ್ಲಿ ಹಳ್ಳಿಗಳಲ್ಲಿ ಬೇಸಿಗೆಯಿಂದ ನೀರಿನ ಅಭಾವ ಉಂಟಾಗಿ, ಹಲವು ಬೆಳೆಗಳು ಒಣಗುತ್ತಿವೆ. ಅದರಲ್ಲೂ ಸಾಕಷ್ಟು ಕಬ್ಬು ಬೆಳೆಗಾರರು ಕೈ ಸುಟ್ಟುಕೊಳ್ಳುವ ಆತಂಕ ಎದುರಾಗಿದೆ.
ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಹಳ್ಳಿಗಳಾದ ಕಿರಣಗಿ, ಸಂಬರಗಿ, ಕಲ್ಲೂತಿ, ಪಾಂಡೇಗಾಂವ, ಜಂಬಗಿ… ಹಲವು ಗ್ರಾಮಗಳಲ್ಲಿ ಬೆಳೆದ ಕಬ್ಬಿನ ಬೆಳೆ ನೀರು ಇಲ್ಲದೆ ನಾಶವಾಗಿದೆ. ರೈತರಿಗೆ ಆತಂಕ ಎದುರಾಗಿದೆ.
ಈ ಎಲ್ಲ ಗ್ರಾಮಗಳು ಸೇರಿ ಸಂದಾಜು 40 ಸಾವಿರಕ್ಕೂ ಹೆಚ್ಚು ಎಕರೆಯಲ್ಲಿ ರೈತರು ಕಬ್ಬು ಬೆಳೆದಿದ್ದಾರೆ. ಇದರಲ್ಲಿ ಬಹುಪಾಲು ರೈತರ ಬೆಳೆಗಳು ಒಣಗಿ ಹೋಗಿವೆ. ಇದರಿಂದ ಇಳುವರಿ ಕುಸಿದು, ಕಬ್ಬು ಬೆಳೆಗಾರ ಚಿಂತೆಗೀಡಾಗಿದ್ದಾರೆ.
ಉತ್ತರ ಭಾಗಕ್ಕೆ ನೀರು ಒದಗಿಸುವ ಮಹತ್ವದ ಯೋಜನೆ ‘ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ’ ಸುಮಾರು ಏಳೆಂಟು ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ. ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಹಲವು ರೈತರು ತಮ್ಮ ಜಮೀನುಗಳನ್ನು ಯೋಜನೆಗೆ ನೀಡಿದ್ದು ಇತ್ತ ನೀರು ಇಲ್ಲ, ಜಮೀನು ಇಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಿದೆ.
– ಪಿಂಟು ಕೋಳಿ, ರೈತ ಸಂಬರಗಿ ಗ್ರಾಮಸಾವಿರಾರು ರೂಪಾಯಿ ಖರ್ಚು ಮಾಡಿ ಕಬ್ಬು ಬೆಳೆ ಮಾಡಿದಿದ್ದೇವೆ. ಈ ಬಾರಿ ಮಳೆ ವಿಳಂಬವಾಗಿದೆ. ನೀರು ಇಲ್ಲದೆ ಸಾವಿರಾರು ಎಕರೆ ಬೆಳೆ ಒಣಗಿದೆ. ಸರ್ಕಾರ ತಕ್ಷಣ ಸ್ಪಂದಿಸಲಿಈ ಭಾಗದಲ್ಲಿ ಅಂದಾಜು 10 ಸಾವಿರ ಎಕರೆಗೂ ಹೆಚ್ಚು ಜಮೀನಿನಲ್ಲಿ ಬೆಳೆದ ಕಬ್ಬು ಒಣಗಿ ನಿಂತಿದೆ. ನೀರಾವರಿ ಸೌಕರ್ಯ ಹೊಂದಿದವರು ಈವರೆಗೆ ಬಾವಿಯಲ್ಲಿ ಇದ್ದ ನೀರು ಹಾಯಿಸಿ ಹೇಗೋ ಕಾಪಾಡಿಕೊಂಡಿದ್ದರು. ಆದರೆ, ಈ ಬಾರಿ ಬಿಸಿಲು ಹಚ್ಚಾಗಿದ್ದರಿಂದ ತಾಪಮಾನಕ್ಕೆ ಬಾವಿಗಳೂ ಬರಿದಾಗಿವೆ.
ಕಾಗವಾಡದಲ್ಲಿ ರೈತರು ಸಾವಿರ ಅಡಿ ಆಳಕ್ಕೆ ಬೋರ್ ಕೊರೆಯಿಸಿದರೂ ನೀರು ಬಾರದ ಸ್ಥಿತಿಪ್ರತಿ ವರ್ಷ ಮೇ ತಿಂಗಳಲ್ಲಿ ಅಕಾಲಿಕ ಮಳೆಯಾಗುತ್ತಿತ್ತು. ಆದರೆ ಈ ವರ್ಷ ಒಂದು ಮಳೆಯೂ ಆಗಿಲ್ಲ. ಇದು ರೈತರಲ್ಲಿ ಆತಂಕ ಹೆಚ್ಚು ಮಾಡಿದೆ. ಈಗೀಗ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಾವಿರ ಅಡಿಗಳ ವರಗೆ ಬೋರ್ವೆಲ್ ಕೊರೆಸಿದರೂ ನೀರು ಸಿಗದೆ ರೈತರು ಕಂಗಾಲಾಗಿದ್ದಾರೆ.
ಕಾಗವಾಡ ವಿಧಾನ ಸಭಾ ಮತ ಕ್ಷೇತ್ರದ ಸುಮಾರು 20 ಹಳ್ಳಿಗಳ ರೈತರಿಗೆ ತೊಂದರೆ ಆಗಿದ್ದು, ಸರ್ಕಾರ ಈ ಭಾಗದ ರೈತರ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕು. ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕ ರಾಜು ಕಾಗೆ ಅವರು ಮನವರಿಕೆ ಮಾಡಿ, ನೆರವಿಗೆ ಬರಬೇಕು. ಎಕರೆಗೆ₹50 ಸಾವಿರ ಪರಿಹಾರ ಕೊಡಿಸಬೇಕು ಎಂದು ಗಡಿ ಭಾಗದ ರೈತರು ಆಗ್ರಹಿಸಿದ್ದಾರೆ.