ಪ್ರಯಾಣಿಸುತ್ತಿದ್ದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಕೆಗೆ ಮಹಿಳಾ ಕಂಡಕ್ಟರ್ ಬಸ್ನಲ್ಲೇ ಹೆರಿಗೆ ಮಾಡಿಸಿದ ಅಪರೂಪದ ಪ್ರಸಂಗವೊಂದು ನಡೆದಿದೆ.
ಚಿಕ್ಕಮಗಳೂರು ಘಟಕದ ಕೆಎಸ್ಆರ್ಟಿಸಿ ಬಸ್ನಲ್ಲಿ ಈ ಪ್ರಕರಣ ನಡೆದಿದೆ.ಚಿಕ್ಕಮಗಳೂರು ವಿಭಾಗದ ಚಿಕ್ಕಮಗಳೂರು ಘಟಕದ ವಾಹನ ಸಂಖ್ಯೆ ಕೆಎ-13 ಎಫ್-0855ರಲ್ಲಿ ಬೆಂಗಳೂರು-ಚಿಕ್ಕಮಗಳೂರು ಮಾರ್ಗವಾಗಿ ನಿನ್ನೆ ತೆರಳುತ್ತಿದ್ದಾಗ ಉದಯಪುರ ಸಮೀಪದ ಕೃಷಿ ಕಾಲೇಜು ಹತ್ತಿರ ಮಧ್ಯಾಹ್ನ 1.25ರ ಸುಮಾರಿಗೆ ಈ ಘಟನೆ ನಡೆದಿತ್ತು. ಈ ಸಂದರ್ಭದಲ್ಲಿ ಬಸ್ನಲ್ಲಿ 15 ಪ್ರಯಾಣಿಕರಿದ್ದರು. ಈ ಬಸ್ನಲ್ಲಿ ಬೇಲೂರಿಗೆ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ಹೆರಿಗೆ ನೋವು ಉಂಟಾಗಿದ್ದು, ಹತ್ತಿರ ಯಾವುದೂ ಆಸ್ಪತ್ರೆ ಇರಲಿಲ್ಲ. ಆಕೆಗೆ ತಕ್ಷಣದ ಸಹಾಯದ ಅಗತ್ಯವಿರುವುದನ್ನು ಮನಗಂಡ ಬಸ್ ನಿರ್ವಾಹಕಿ ಹಾಗೂ ಚಾಲಕಿಯೂ ಆಗಿರುವ ಎನ್. ವಸಂತಮ್ಮ ಕೂಡಲೇ ಬಸ್ ನಿಲ್ಲಿಸಿದರು.
ನಂತರ ವಾಹನದಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಬಸ್ನಿಂದ ಕೆಳಕ್ಕಿಳಿಸಿ ಗರ್ಭಿಣಿಗೆ ಹೆರಿಗೆ ಮಾಡಿಸಿದ್ದಾರೆ. ಗರ್ಭಿಣಿ ಮಹಿಳೆ ಆರ್ಥಿಕವಾಗಿ ಸಬಲರಲ್ಲದ್ದರಿಂದ ಆಕೆಯ ತುರ್ತು ಖರ್ಚಿಗಾಗಿ ಪ್ರಯಾಣಿಕರಿಂದ ಒಟ್ಟು 1,500 ರೂ. ಸಂಗ್ರಹಿಸಿ ನೀಡಿರುತ್ತಾರೆ. ಬಳಿಕ ಆ್ಯಂಬುಲೆನ್ಸ್ ಮೂಲಕ ಶಾಂತಿಗ್ರಾಮ ಆಸ್ಪತ್ರೆಗೆ ಕಳುಹಿಸಿ ದಾಖಲಿಸಿರುತ್ತಾರೆ.