ಬೆಂಗಳೂರು: ಹಸಿವು ಮುಕ್ತ ರಾಜ್ಯ ನಿರ್ಮಾಣದಲ್ಲಿ ಅನ್ನಭಾಗ್ಯ ಯೋಜನೆ ಪ್ರಮುಖವಾಗಿದ್ದು, ಮೂರು ಮಾದರಿಯಲ್ಲಿ ರಾಜ್ಯ ಸರ್ಕಾರ ಪಡಿತರ ವಿತರಣಾ ವ್ಯವಸ್ಥೆ ಕಲ್ಪಿಸಿದೆ. ಅಂತ್ಯೋದಯ, ಆದ್ಯತಾ, ಆದ್ಯೇತರ ವರ್ಗಗಳನ್ನಾಗಿ ಪರಿವರ್ತಿಸಿ ಪಡಿತರ ವಿತರಣೆ ಮಾಡುತ್ತಿದೆ. ರಾಜ್ಯದ 1.16 ಕೋಟಿ ಕುಟುಂಬ ಆದ್ಯತಾ ಪಡಿತರ ಚೀಟಿ ಹೊಂದಿದ್ದು, ಆಹಾರ ಇಲಾಖೆಯ ಪಡಿತರ ಸೌಲಭ್ಯ ಪಡೆದುಕೊಳ್ಳುತ್ತಿದೆ. ಇದರಲ್ಲಿಯೂ ನಕಲಿಗಳ ಹಾವಳಿ ವ್ಯಾಪಕವಾಗಿದ್ದು, ಇದರ ತಡೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮುಂದಾಗಿದೆ.
ಅಂತ್ಯೋದಯ ಪಡಿತರ ಚೀಟಿ ಯಾರು ಪಡೆಯಬಹುದು : ಭೂರಹಿತ ಕೃಷಿ ಕಾರ್ಮಿಕರು, ಅಂಚಿನ ಕೃಷಿಕರು, ಗ್ರಾಮೀಣ ಕುಶಲಕರ್ಮಿಗಳಾದ ಮಡಿಕೆ ಮಾಡುವವರು, ಚರ್ಮಕಾರರು, ನೇಕಾರರು, ಕಮ್ಮಾರರು, ಬಡಗಿಗಳು, ಕೊಳಚೆ ನಿವಾಸಿಗಳು ಅಂತ್ಯೋದಯ ಪಡಿತರ ಚೀಟಿ ಪಡೆಯಲು ಅರ್ಹರಾಗಿದ್ದಾರೆ. ಇವರ ಜೊತೆ ವಿಧವೆಯರು ಮುಖ್ಯಸ್ಥರಾಗಿರುವ ಕುಟುಂಬ, ಸಂಪೂರ್ಣ ಅನಾರೋಗ್ಯಕ್ಕೆ ಒಳಗಾಗಿರುವ ವ್ಯಕ್ತಿಗಳು, ವಿಶೇಷ ಚೇತನರು, 60 ವರ್ಷ ತುಂಬಿದ ವ್ಯಕ್ತಿಗಳು, ನಿರ್ದಿಷ್ಟ ಜೀವನೋಪಾಯ ಮಾರ್ಗೋಪಾಯವಿಲ್ಲದ ವ್ಯಕ್ತಿಗಳು, ಸಾಮಾಜಿಕ ಬೆಂಬಲವಿಲ್ಲದ ಕುಟುಂಬಗಳಲ್ಲಿನ ಬಡವರಲ್ಲಿ ಅತಿ ಬಡವರು 15 ಸಾವಿರಕ್ಕಿಂತ ಕಡಿಮೆ ವಾರ್ಷಿಕ ಆದಾಯ ಇರುವ ಕುಟುಂಬಗಳು ಅಂತ್ಯೋದಯ ಪಡಿತರ ಚೀಟಿಯನ್ನು ಪಡೆಯಬಹುದಾಗಿದೆ.
ಆದ್ಯತಾ ಪಡಿತರ ಚೀಟಿಗೆ ಒಳಪಡದವರು : ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಆದ್ಯತಾ ಪಡಿತರ ಚೀಟಿ ನೀಡಲಾಗುತ್ತದೆ. ವೇತನವನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲ ಖಾಯಂ ಅಂದರೆ ಸರ್ಕಾರದ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಮಂಡಳಿಗಳು, ನಿಗಮಗಳು, ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿಸುವ ಎಲ್ಲ ಕುಟುಂಬಗಳು ಆದ್ಯತಾ ಪಡಿತರ ಚೀಟಿ ಪಡೆಯುವ ಪಟ್ಟಿಯಿಂದ ಹೊರಗಿರಲಿವೆ.