ಚಿಕ್ಕಮಗಳೂರು: ಬೆಂಗಳೂರಿನಿಂದ ಬಂದಿದ್ದ ಸ್ನೇಹಿತರ ಜೊತೆ ಈಜಲು ಹೋದ ಯುವಕ ನೀರು ಪಾಲಾಗಿದ್ದಾನೆ. ಆದರೆ ಯುವಕ ನೀರಿನಲ್ಲಿ ಮುಳುಗುತ್ತಿದ್ದಂತೆ ಸ್ನೇಹಿತರು ಆತನ ಮೊಬೈಲ್ ತೆಗೆದುಕೊಂಡು ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಆಲ್ದೂರಿನ ಗ್ರಾಮದಲ್ಲಿ ನಡೆದಿದೆ.
ಅನ್ವಿತ್ (18) ಮೃತ ಯುವಕ. ತಂದೆಯನ್ನ ಕಳೆದುಕೊಂಡಿದ್ದ ಅನ್ವಿತ್ ಅಮ್ಮ-ಅಕ್ಕನಿಗೆ ಆಸರೆಯಾಗಿದ್ದನು. ಅಕ್ಕನನ್ನು ಈತನೇ ಓದಿಸುತ್ತಿದ್ದು, ಬೆಂಗಳೂರಲ್ಲಿ ಬೇಕರಿ ಕೆಲಸ ಮಾಡಿಕೊಂಡಿದ್ದನು. ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಊರಿಗೆ ಬಂದಿದ್ದ ಅನ್ವಿತ್ ಮತ್ತೆ ಬೆಂಗಳೂರಿಗೆ ಹೋಗಿರಲಿಲ್ಲ. ನಂತರ ಊರಿನಲ್ಲೇ ಓಮ್ನಿ ಕಾರನ್ನ ಬಾಡಿಗೆ ಇಟ್ಟುಕೊಂಡಿದ್ದನು. ಜೊತೆಗೆ ಕುಡಿಯುವ ನೀರಿನ ಕ್ಯಾನ್ ಬ್ಯುಸಿನೆಸ್ ಮಾಡುತ್ತಿದ್ದನು
ಐದು ದಿನದ ಹಿಂದೆ ಬೆಂಗಳೂರಿನಿಂದ ಸ್ವಿಫ್ಟ್ ಕಾರಿನಲ್ಲಿ ಬಂದ ಮೂವರು, ಪಾರ್ಟಿ ಮಾಡೋ ನೆಪದಲ್ಲಿ ಆಲ್ದೂರು ಸಮೀಪದ ನದಿಗೆ ಕರೆದುಕೊಂಡು ಹೋಗಿದ್ದರು. ಆದರೆ ಸ್ನೇಹಿತರು ನಾಪತ್ತೆಯಾಗಿದ್ದು, ನದಿಯಲ್ಲಿ ಅನ್ವಿತ್ ಶವವಾಗಿ ಪತ್ತೆಯಾಗಿದ್ದಾನೆ. ಅನ್ವಿತ್ಗೆ ಈಜಲು ಬರುತ್ತಿರಲಿಲ್ಲ. ಆತ ನೀರಿಗೆ ಇಳಿದಿಲ್ಲ, ಬೆಂಗಳೂರಿನಿಂದ ಬಂದವರು ಕೊಲೆ ಮಾಡಿದ್ದಾರೆ ಎಂದು ಮೃತನ ತಾಯಿ ಆರೋಪಿಸಿದ್ದಾರೆ.
ಅನ್ವಿತ್ ಸ್ನೇಹಿತರು ಆತ ನೀರಿನಲ್ಲಿ ಮುಳುಗುತ್ತಿದ್ದಂತೆ ಅಲ್ಲಿಂದ ಪರಾರಿಯಾಗಿದ್ದಾರೆ. ಇದುವರೆಗೂ ಫೋನ್ ಆನ್ ಆಗಿದೆ. ಕಾಲ್ ಮಾಡಿದರೆ ರಿಸೀವ್ ಮಾಡುತ್ತಾರೆ. ಆದರೆ ಯಾರೂ ಮಾತನಾಡುವುದಿಲ್ಲ. ಅನ್ವಿತ್ ಬೆಂಗಳೂರಲ್ಲಿ ಕೆಲಸ ಮಾಡುವಾಗ ಇದ್ದ ಸ್ನೇಹಿತರು ಊರಿಗೆ ಬರೋದಾಗಿ ಹಿಂದಿನ ದಿನವೇ ತಿಳಿಸಿದ್ದರು. ಅದರಂತೆಯೇ ಸ್ವಿಫ್ಟ್ ಕಾರಲ್ಲಿ ಬಂದಿರೋದು, ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಹಾಕಿಸಿರುವುದು, ಬಾರ್ಗೆ ಹೋಗಿ ಎಣ್ಣೆ ಖರೀದಿಸಿರೋದು ಎಲ್ಲದರ ಸಿಸಿಟಿವಿ ದೃಶ್ಯ ಕೂಡ ಇದೆ. ನಾನು ಸ್ನೇಹಿತರ ಜೊತೆ ಹೋಗುತ್ತೀನಿ ಅಂತ ಅನ್ವಿತ್ ತಾಯಿಗೆ ಫೋನ್ ಮಾಡಿ ಹೋಗಿದ್ದನು.