ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಮಾಣ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಕಲಾಪಗಳಿಗೆ ವಿಧಿಸಿದ್ದ ನಿರ್ಬಂಧಗಳನ್ನು ಸಡಿಲಿಸಲಾಗಿದ್ದು, ಸೋಮವಾರದಿಂದ ಜಾರಿಗೆ ಬರುವಂತೆ ಹೊಸ ಎಸ್ಒಪಿ ಹೊರಡಿಸಲಾಗಿದೆ.
ಹೈಕೋರ್ಟ್ ಕಲಾಪಗಳಿಗೆ ಸಂಬಂಧಿಸಿದಂತೆ ನೂತನ ಎಸ್ಒಪಿ ಪ್ರಕಟಿಸಿ ರಿಜಿಸ್ಟ್ರಾರ್ ಜನರಲ್ ಟಿ.ಜಿ.ಶಿವಶಂಕರೇಗೌಡ ಆದೇಶ ಹೊರಡಿಸಿದ್ದು, ಬೆಂಗಳೂರು ಪ್ರಧಾನ ಪೀಠದಲ್ಲಿ ಭೌತಿಕ ಕಲಾಪಗಳಿಗೆ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಲಾಗಿದೆ.
ಬೆಂಗಳೂರು, ಧಾರವಾಡ ಹಾಗೂ ಕಲಬುರಗಿ ಪೀಠಗಳಿಗೆ ಅನ್ವಯವಾಗುವಂತೆ ಹೊರಡಿಸಲಾಗಿರುವ ನೂತನ ಮಾರ್ಗಸೂಚಿಗಳು ಫೆ.7ರಿಂದ ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿವೆ ಎಂದು ಹೇಳಲಾಗಿದೆ.
ಎಸ್ಒಪಿಯಲ್ಲೇನಿದೆ?
* ಹೈಕೋರ್ಟ್ನ ಎಲ್ಲ ಪೀಠಗಳಲ್ಲೂ ವರ್ಚುವಲ್ ಹಾಗೂ ಭೌತಿಕ ಕಲಾಪಗಳು ನಡೆಯಲಿವೆ.
* ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿ ನಿಗದಿಯಾದ ಪ್ರಕರಣಗಳ ವಕೀಲರು ಹಾಗೂ ಪಾರ್ಟಿ-ಇನ್-ಪರ್ಸನ್ಗಳು ಕೋರ್ಟ್ ಆವರಣ ಪ್ರವೇಶಿಸಬಹುದು. ಕೋವಿಡ್ ನಿಯಮ ಪಾಲನೆ ಕಡ್ಡಾಯ.
* ನ್ಯಾಯಾಲಯದ ನಿರ್ದೇಶನವಿದ್ದರೆ ಅಥವಾ ಅನುಮತಿ ಇದ್ದರೆ ಮಾತ್ರ ಕಕ್ಷಿದಾರರು ಆ ಕುರಿತ ದಾಖಲೆ ತೋರಿಸಿ ಕೋರ್ಟ್ ಆವರಣ ಪ್ರವೇಶಿಸಬೇಕು.
* ಕೋರ್ಟ್ ಆವ್ರಣ ಪ್ರವೇಶಿಸುವ ಪ್ರತಿಯೊಬ್ಬರೂ ಎನ್-95 ಮಾಸ್ಕ್ ಸೇರಿ ಎರಡು ಮಾಸ್ಕ್ ಧರಿಸಿರಬೇಕು.
* ಪ್ರಕರಣಗಳನ್ನು ಇ-ಫೈಲಿಂಗ್ ಜತೆಗೆ ಭೌತಿಕವಾಗಿಯೂ ದಾಖಲಿಸಬಹುದು.
* ತುರ್ತು ವಿಚಾರಣೆ ಅಗತ್ಯವಿದ್ದಲ್ಲಿ ನಿಗದಿತ ಕೌಂಟರ್ನಲ್ಲಿ ಮೆಮೋ ಸಲ್ಲಿಸಬೇಕು.
* ನಿರೀಕ್ಷಣಾ ಜಾಮೀನು, ಜಾಮೀನು, ಪ್ರಕರಣ ರದ್ದತಿ ಕೋರಿ ಸಲ್ಲಿಸುವ ರಿಟ್ ಅರ್ಜಿಗಳು, ಕ್ರಿಮಿನಲ್ ಅಪೀಲ್ ಮತ್ತು ಕ್ರಿಮಿನಲ್ ರಿವಿಷನ್ ಅರ್ಜಿಗಳು, ಸಲ್ಲಿಕೆಯಾದ 4ನೇ ದಿನ ಪೀಠದ ಎದುರು ಬರಲಿವೆ. ಇತರ ರಿಟ್ ಅರ್ಜಿಗಳು ಹಾಗೂ ಸಿವಿಲ್ ಪ್ರಕರಣಗಳು 5ನೇ ದಿನ ಪೀಠದ ಎದುರು ನಿಗದಿಪಡಿಸಲಾಗುತ್ತದೆ.