ಉತ್ತರಕರ್ನಾಟಕದ ಬಗ್ಗೆ ಮೊದಲೇ ಚರ್ಚಿಸುವದಿದ್ರೆ ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ಕರೆಯಿರಿ. ಸುಮ್ಮನೆ ಜಾತ್ರೆ ಮಾಡಲು ಅಧಿವೇಶನ ಕರೆಯುವ ಅವಶ್ಯಕತೆ ಇಲ್ಲ ಎಂದು ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅಧಿವೇಶನ ಬಳಿಕ ಬೆಳಗಾವಿಯ ಸುವರ್ಣಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಅಧಿವೇಶನದ ಪ್ರಾರಂಭದಲ್ಲಿಯೇ ಉತ್ತರಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚಿಸಬೇಕಾಗಿತ್ತು. ಎಲ್ಲ ಸಚಿವರು ಇರುತ್ತಿದ್ದರು. ಮುಖ್ಯಮಂತ್ರಿಗಳು ಉತ್ತರ ಕೊಡಬಹುದಿತ್ತು.
ಉದ್ದೇಶಪೂರ್ವಕವಾಗಿ ಈ ಒಂದು ಚರ್ಚೆಯನ್ನು ಕೊನೆಯ 2 ದಿನ ಇಟ್ಟುಕೊಂಡು ಯಾವುದೇ ಚರ್ಚೆಗೆ ಆಸ್ಪದ ಇರದ ರೀತಿಯಲ್ಲಿ. ಸರಿಯಾಗಿ ಉತ್ತರವನ್ನು ವಿಪಕ್ಷಗಳು ಕೇಳಲಿಲ್ಲ. ಅದೇ ರೀತಿ ಆಡಳಿತ ಪಕ್ಷದವರು ಉತ್ತರ ಹೇಳಲು ಬಿಡಲಿಲ್ಲ. ಬೆಳಗಾವಿಯ ಸುವರ್ಣಸೌಧ ಕೇವಲ 15 ದಿನದ ಮಟ್ಟಿಗೆ ಮಾತ್ರ ಉಪಯೋಗ ಆಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಕಷ್ಟು ಕಚೇರಿಗಳು ಇಲ್ಲಿಗೆ ಬರಬೇಕಿತ್ತು. ಸುವರ್ಣಸೌಧದ ಪೂರ್ಣ ಉಪಯೋಗ ಆಗಬೇಕಿತ್ತು. ಇನ್ನು ಸಿಎಂ ಕೂಡ ಅಧಿವೇಶನದ ಮೊದಲ 5 ದಿನ ಚರ್ಚೆ ಮಾಡಿ ಉತ್ತರಕರ್ನಾಟಕದ ಅಭಿವೃದ್ಧಿ ಬಗ್ಗೆ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಉತ್ತರ ಕೊಡಬೇಕಿತ್ತು. ನಮಗೆ ಮಾತನಾಡಲು ಅವಕಾಶ ನೀಡದೇ ಇರುವುದಕ್ಕೆ ನೋವಾಗಿದೆ ಎಂದರು.