ಐತಿಹಾಸಿಕಸ್ಥಳಗಳು, ಸ್ವಾತಂತ್ರ್ಯ ಹೋರಾಟಗಾರರು, ಅನೇಕ ಸಾಹಿತಿಗಳು, ಕವಿಪುಂಗವರನ್ನು ಕೊಟ್ಟಂತಹ ಜಿಲ್ಲೆ ವಿಜಯಪುರ. ಇದೀಗ, ಈ ಜಿಲ್ಲೆಯು ಕಲ್ಲನ್ನು ಕೆತ್ತಿ ಸುಂದರ ಶಿಲ್ಪಿಯನ್ನಾಗಿಸೋ ಶಕ್ತಿ ಇರೋ ಶಿಕ್ಷಕರನ್ನು ಸಹ ನೀಡಿದೆ. ಗುರುಬ್ರಹ್ಮ, ಗುರುವಿಷ್ಣು, ಗುರುದೇವೋ ಮಹೇಶ್ವರ, ಗುರುಸಾಕ್ಷಾತ್ ಪರಬ್ರಹ್ಮ, ತಸ್ಮೈಶ್ರೀ ಗುರುವೇ ನಮಃ ಎಂಬ ಮಾತು, ಇಂಡಿ ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಅಕ್ಷರಶಃ ನಿಜವಾಗಿದೆ.
ಗುಮ್ಮಟನಗರಿ ಜನರು ಶಿಕ್ಷಕರ ಮೇಲಿನ ಅಪಾರ ಪ್ರೀತಿಯಿಂದಾಗಿ, ರೇವಣಸಿದ್ದಪ್ಪ ಮಾಸ್ತರಿಗಾಗಿ ಒಂದು ಗುಡಿಯನ್ನೇ ನಿರ್ಮಿಸಿದ್ದಾರೆ. ಇಂದಿಗೂ ಪ್ರತಿನಿತ್ಯ ಇಲ್ಲಿ ಪೂಜೆ-ಪುನಸ್ಕಾರಗಳು ನಡೆಯುತ್ತವೆ. ಈ ಮೂಲಕ ಇಲ್ಲಿ, ಶಿಕ್ಷಕರ ರೂಪದಲ್ಲಿ ದೇವರು ಇದ್ದಾನೆ ಎಂದು ಈ ಗ್ರಾಮದ ಜನರು ತೋರಿಸಿಕೊಟ್ಟಿದ್ದಾರೆ.
ರೇವಣಸಿದ್ದಪ್ಪ ಮಾಸ್ತರ್. ಬಸವನ ಬಾಗೇವಾಡಿ ತಾಲೂಕಿನ ಮನಗೂಳಿಯಲ್ಲಿ 1889. ಮೇ 26ರಂದು ಜನಿಸಿದರು. ಅವರ ನಿರಂತರ ದುಡಿಮೆಯಿಂದಾಗಿ, ಶಾಲೆಗೆ ಒಬ್ಬ ಅಸಿಸ್ಟೆಂಟ್ ಶಿಕ್ಷಕ ಹುದ್ದೆ ಹಾಗೂ ಹೆಣ್ಣು ಮಕ್ಕಳಿಗೊಂದು ಪ್ರತ್ಯೇಕ ಶಾಲೆ ಮಂಜೂರಾದವು. ಇದ್ರಿಂದ, ಅನೇಕ ಹೆಣ್ಣು ಮಕ್ಕಳು, ಬಾಲ್ಯವಿವಾಹದಿಂದ ಮುಕ್ತಿ ಪಡೆದು ಅಕ್ಷರ ಜ್ಞಾನ ಪಡೆದ್ರು. ರೇವಣಸಿದ್ದಪ್ಪ ಮಾಸ್ತರ್, ಮನೆ ಮನೆಗೆ ಹೋಗಿ ಅಕ್ಷರಕ್ರಾಂತಿ ಮಾಡಿದ್ದಾರೆ. ಅವರು, ಅಂದು ಆರಂಭಿಸಿದ್ದ ಶಾಲೆ ಇಂದಿಗೂ ಅಥರ್ಗಾದಲ್ಲಿ ಇದೆ. 1930ರ ದಶಕದಲ್ಲಿ ಮಾಸ್ತರರ ಚಿಕ್ಕದೊಂದು ಮೂರ್ತಿ ಸ್ಥಾಪಿಸಿ, ದೇವಸ್ಥಾನವನ್ನು ನಿರ್ಮಿಸಲಾಗಿದೆ.
ಒಟ್ನಲ್ಲಿ, ಶಿಕ್ಷಕನೋರ್ವ ಈ ಗ್ರಾಮದ ಪ್ರತಿ ಮನೆಗಳಲ್ಲೂ ದೇವರಂತೆ ಪೂಜೆಗೊಳ್ಳುತ್ತಾನೆ. ಅಲ್ಲದೇ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಂಡು ದೇವರಾಗಿದ್ದಾನೆ. ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಇಂತಹ ಶಿಕ್ಷಕರ ಕಾರ್ಯದ ಸ್ಮರಣೆ ನಿಜಕ್ಕೂ ಶ್ಲಾಘನೀಯ.