ಉಡುಪಿ: ರಾಜ್ಯ ಗೃಹ ಸಚಿವ ಉಡುಪಿ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಮೇಲೆ ಸಮುದ್ರ ರಾಜ ಎರಗಿದ್ದಾನೆ. ಉಡುಪಿಯ ನೆರೆಪೀಡಿತ ಪ್ರದೇಶಗಳ ಪ್ರವಾಸ ಕೈಗೊಂಡ ಸಂದರ್ಭ ಸಮುದ್ರದ ಅಲೆ ಸಚಿವ ಬೊಮ್ಮಾಯಿ ಅವರಿಗೆ ಬಡಿದಿದೆ.
ಉಡುಪಿ ಜಿಲ್ಲೆ ಕಾಪು ತಾಲೂಕು ಪಡುಬಿದ್ರೆ ಕಡಲಕಿನಾರೆಗೆ ಬಸವರಾಜ್ ಬೊಮ್ಮಾಯಿ ಮೊದಲ ಭೇಟಿ ಕೊಟ್ಟರು. ಸಮುದ್ರ ಕೊರೆತ ವೀಕ್ಷಿಸಿದ ಬೊಮ್ಮಾಯಿ, ಅರಬ್ಬಿ ಸಮುದ್ರಕ್ಕೆ ಇಳಿದರು. ಈ ಸಂದರ್ಭ ಬೃಹತ್ ಗಾತ್ರದ ಅಲೆ ಗೃಹ ಸಚಿವ ಬೊಮ್ಮಾಯಿ ಮೇಲೆರಗಿದೆ. ಗೃಹಸಚಿವರ ಒಂದು ಚಪ್ಪಲಿಯನ್ನು ಅಲೆ ಕೊಚ್ಚಿಕೊಂಡು ಹೋಗಿದೆ. ಇನ್ನೊಂದು ದೊಡ್ಡ ಅಲೆ ಸಚಿವರ ಮೇಲೆ ಅಪ್ಪಳಿಸಿದೆ. ಸಚಿವರು ಅರ್ಧ ಒದ್ದೆಯಾದರು.
ಸ್ಥಳದಲ್ಲಿದ್ದು ಬಿಜೆಪಿ ನಾಯಕರು ಬಸವರಾಜ್ ಬೊಮ್ಮಾಯಿ ರಕ್ಷಣೆಗೆ ಬಂದಿದ್ದಾರೆ. ಕ್ಷಣಾರ್ಧದಲ್ಲಿ ಉಡುಪಿ ಎಸ್ಪಿ ವಿಷ್ಣುವರ್ಧನ್ ಸ್ಥಳಕ್ಕಾಗಮಿಸಿ ಗೃಹ ಸಚಿವರ ರಕ್ಷಣೆ ಮಾಡಿದ್ದಾರೆ. ಗೃಹ ಸಚಿವರ ಚಪ್ಪಲಿಯನ್ನು ಎತ್ತಿಕೊಂಡು ಹೋಗಿದ್ದ ಸಮುದ್ರದ ಚಪ್ಪಲಿಯನ್ನು ದಡಕ್ಕೆ ಎಸೆದಿದೆ. ಬೊಮ್ಮಾಯಿ ಇಂದು ಕಾರ್ಕಳ, ಹೆಬ್ರಿ, ಬೈಂದೂರು, ಕುಂದಾಪುರ, ಬ್ರಹ್ಮಾವರ ತಾಲೂಕಿನಲ್ಲಿ ನೆರೆ ಪ್ರವಾಸ ಮಾಡಲಿದ್ದಾರೆ