ಗದಗ: ರಾಜ್ಯದಲ್ಲಿ ಪತ್ತೆಯಾಗಿರುವ ಕೊರೊನಾ ಪ್ರಕರಣಗಳ ಪೈಕಿ ಬಹುಪಾಲು ಅನ್ಯರಾಜ್ಯಗಳದ್ದವೇ ಆಗಿವೆ. ಅದರಲ್ಲೂ ಮಹಾರಾಷ್ಟ್ರದ ಪಾಲು ದೊಡ್ಡದು. ಇಂತಹ ಸಂದರ್ಭದಲ್ಲಿ ದೇಶದ ಕೊರೊನಾ ಹಾಟ್ಸ್ಪಾಟ್ನಿಂದ ಬಂದ ಯುವತಿ ಕ್ವಾರಂಟೈನ್ ಆಗಲು ನಿರಾಕರಿಸಿದ್ದು, ರಂಪಾಟ ಮಾಡಿದ್ದಾರೆ.
ಯುವತಿ ಪುಣೆಯಿಂದ ಗದಗ ರೈಲ್ವೆ ನಿಲ್ದಾಣಕ್ಕೆ ಬಂದು ಇಳಿದಿದ್ದು, ಇಲ್ಲಿ ಕ್ವಾರಂಟೈನ್ ಆಗುವುದಿಲ್ಲ ಎಂದು ರಂಪಾಟ ನಡೆಸಿದ್ದಾರೆ. ನಮ್ಮ ಊರು ಕೊಪ್ಪಳ ಜಿಲ್ಲೆಯ ಗಂಗಾವತಿ. ಅಲ್ಲಿಯೇ ಕ್ವಾರಂಟೈನ್ ಆಗುತ್ತೇನೆ. ನನ್ನನ್ನು ಅಲ್ಲಿಗೆ ಕಳುಹಿಸಿಕೊಡಿ ಎಂದು ಖ್ಯಾತೆ ತೆಗೆದಿದ್ದಾರೆ.
ತಂದೆ ಸಾವು, ತಾಯಿ ಅನಾರೋಗ್ಯದಿಂದ ಇದ್ದಾರೆ. ಹೀಗಾಗಿ ನಾನು ಗಂಗಾವತಿಗೆ ಹೋಗಲೇಬೇಕು ಎಂದು ಕಣ್ಣೀರು ಹಾಕಿದ್ದಾರೆ. ಅಲ್ಲೇ ಕ್ವಾರಂಟೈನ್ ಮಾಡಿ. ಗದಗನಲ್ಲಿ ಸರ್ಕಾರಿ, ಖಾಸಗಿ ಕ್ವಾರಂಟೈನ್ ಯಾವುದೂ ಬೇಡ ಎಂದು ಯುವತಿ ರಂಪಾಟ ಮಾಡಿದ್ದಾರೆ.