ದಕ್ಷಿಣ ಕನ್ನಡದಲ್ಲಿ ಒಂದೇ ದಿನ ಎರಡು ಪ್ರಕರಣ
ಮಂಗಳೂರು: 21 ವರ್ಷದ ಯುವಕನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಒಂದೇ ದಿನ ರಾಜ್ಯದಲ್ಲಿ 9 ಜನರಿಗೆ ಸೋಂಕು ತಗುಲಿದ್ದು ಜನ ಆತಂಕಕ್ಕೊಳಗಾಗಿದ್ದಾರೆ.
ಕೊರೊನಾ ಸೋಂಕಿತ ಪ್ರಕರಣ 64: 21 ವರ್ಷದ ಯುವಕ, ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಯಾಗಿದ್ದು, ದುಬೈ ದೇಶಕ್ಕೆ ಪ್ರಯಾಣ ಬೆಳೆಸಿರುವ ಹಿನ್ನೆಲೆಯಿದ್ದು, ದಿನಾಂಕ 22.03.2020 ರಂದು ಭಾರತಕ್ಕೆ ವಾಪಸ್ಸಾಗಿರುತ್ತಾರೆ. ಯುವಕನನ್ನು ದಕ್ಷಿಣ ಕನ್ನಡ ಜಿಲ್ಲೆಯ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊರೊನಾ ಸೋಂಕಿತ ಪ್ರಕರಣ 63: ಫ್ರಾನ್ಸ್ ನಿಂದ ದಾವಣಗೆರೆಗೆ ಮರಳಿದ್ದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಮಾರ್ಚ್ 22ರಂದು ಫ್ರಾನ್ಸ್ನ ಪ್ಯಾರಿಸ್ನಿಂದ ವ್ಯಕ್ತಿ ದಾವಣಗೆರೆಗೆ ಬಂದಿದ್ದರು. ಈ ಬಗ್ಗೆ ಜಿಲ್ಲಾ ಸರ್ವೇಕ್ಷಣ ಘಟಕಕ್ಕೆ ಮಾಹಿತಿ ತಿಳಿದ ತಕ್ಷಣ ವ್ಯಕ್ತಿಯನ್ನು ತಪಾಸಣೆಗೆ ಒಳಪಡಿಸಲಾಯಿತು. ಆಗ ಯಾವುದೇ ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬರದ ಹಿನ್ನೆಲೆ ವ್ಯಕ್ತಿಯನ್ನು 14 ದಿನಗಳು ಮನೆಯಲ್ಲಿಯೇ ಇರುವಂತೆ ಸೂಚಿಸಿದ್ದರು.
ಆದರೆ ಮಾರ್ಚ್ 25ರಂದು ವ್ಯಕ್ತಿಯಲ್ಲಿ ಕೆಮ್ಮು, ಗಂಟಲು ನೋವು, ಜ್ವರ ಕಾಣಿಸಿಕೊಂಡಿದ್ದು ಅವರನ್ನು ತಪಾಸಣೆ ಒಳಪಡಿಸಲಾಗಿತ್ತು. ಇಂದು ವ್ಯಕ್ತಿಯ ವೈದ್ಯಕೀಯ ಪರೀಕ್ಷೆಯ ವರದಿ ಬಂದಿದ್ದು, ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸದ್ಯ ಸೋಂಕಿತ ವ್ಯಕ್ತಿಯನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗಿದ್ದು, ಸೋಂಕಿತ ಒಟ್ಟು 18 ಮಂದಿ ಜೊತೆ ನೇರ ಸಂಪರ್ಕ ಹೊಂದಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಅವರನ್ನೂ ಕೂಡ ತಪಾಸಣೆಗೆ ಒಳಪಡಿಸಲಾಗಿದೆ.
ಕೊರೊನಾ ಸೋಂಕಿತ ಪ್ರಕರಣ 56: 10 ತಿಂಗಳ ಗಂಡು ಮಗು, ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿ, ಯಾವುದೇ ಕೋವಿಡ್-19 ಪ್ರಭಾವಿತ ದೇಶಕ್ಕೆ ಪ್ರಯಾಣಿಸಿದ ಹಿನ್ನೆಲೆ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿನ ಪೋಷಕರು ಕೇರಳ ರಾಜ್ಯ/ಗಡಿಗೆ ಭೇಟಿ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿವೆ.