ಬೆಂಗಳೂರು (ಜೂ. 18): ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳ ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಈಗಾಗಲೇ ಅಂತಿಮವಾಗಿದೆ. ಬಿಜೆಪಿಯಿಂದ ಎಂಎಲ್ಸಿ ಟಿಕೆಟ್ ಪಡೆಯುವಲ್ಲಿ ಹೆಚ್. ವಿಶ್ವನಾಥ್ ಸೋತಿದ್ದಾರೆ. ತಮಗೆ ವಿಧಾನ ಪರಿಷತ್ ಟಿಕೆಟ್ ತಪ್ಪಲು ಸಿದ್ದರಾಮಯ್ಯ ಕಾರಣ ಎಂದು ಅವರು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ‘ವಿಶ್ವನಾಥ್ ಪ್ರಕಾರ ಬಿಜೆಪಿಗೂ ನಾನೇ ಹೈಕಮಾಂಡಾ?’ ಎಂದು ವ್ಯಂಗ್ಯವಾಡಿದ್ದಾರೆ.
ಇಂದು ನಡೆದ ಶಾಸಕಾಂಗ ಪಕ್ಷದ ಸಭೆಯ ಬಳಿಕ ಮಾತನಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಹೆಚ್. ವಿಶ್ವನಾಥ್ಗೆ ಬುದ್ಧಿ ಇಲ್ಲ. ಆತ ಬಿಜೆಪಿಗೂ ನಾನೇ ಹೈಕಮಾಂಡ್ ಎಂದುಕೊಂಡಿರಬೇಕು. ಬಿಜೆಪಿ ನಾಯಕರ ನಿರ್ಧಾರದಿಂದ ಆತನಿಗೆ ಎಂಎಲ್ಸಿ ಟಿಕೆಟ್ ತಪ್ಪಿದೆ’ ಎಂದು ಟೀಕಿಸಿದ್ದಾರೆ.
‘ಕಾಂಗ್ರೆಸ್ನ ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳಿಗೆ ಬಿ ಫಾರಂ ಕೊಟ್ಟಿದ್ದೇವೆ. ಸುಮಾರು 270 ಅರ್ಜಿಗಳು ಬಂದಿದ್ದವು. ಅವೆಲ್ಲವನ್ನೂ ಹೈಕಮಾಂಡ್ಗೆ ಕಳುಹಿಸಿದ್ದೆವು. ಅಂತಿಮವಾಗಿ ಹೈಕಮಾಂಡ್ ನಜೀರ್ ಅಹಮದ್ ಮತ್ತು ಬಿ.ಕೆ. ಹರಿಪ್ರಸಾದ್ ಅವರನ್ನು ಆಯ್ಕೆ ಮಾಡಿದೆ. ಇಬ್ಬರನ್ನೂ ಒಮ್ಮತದಿಂದ ಚುನಾವಣೆಗೆ ಆಯ್ಕೆ ಮಾಡಲಾಗಿದೆ’ ಎಂದಿದ್ದಾರೆ.